
ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಸುಮಾರು 12,700 ಕೋಟಿ ರು. ಹಗರಣದಲ್ಲಿ ಲೆಕ್ಕಪರಿಶೋಧಕರ (ಸಿಎ) ವೈಫಲ್ಯವನ್ನು ಗಮನಿಸಿರುವ ಕೇಂದ್ರ ಸರ್ಕಾರವು ಲೆಕ್ಕಪರಿಶೋಧಕರ ಮೇಲೆ ನಿಯಂತ್ರಣ ವಿಧಿಸುವ ಹೊಸ ಸ್ವತಂತ್ರ ಪ್ರಾಧಿಕಾರ ರಚಿಸಲು ಗುರುವಾರ ಅಂಗೀಕಾರ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅಂಗೀಕಾರ ನೀಡಲಾಯಿತು. 2013ರ ಕಂಪನಿ ಕಾಯ್ದೆಗೆ ಅನುಗುಣವಾಗಿ ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್ಎಫ್ಆರ್ಎ) ಸ್ಥಾಪಿಸಲಾಗುತ್ತದೆ ಎಂದು ಸಂಪುಟ ಸಭೆ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು. 15 ದಿನದಲ್ಲಿ ಇದರ ಅಧಿಸೂಚನೆ ಹೊರಬೀಳಲಿದೆ. 2013ರಲ್ಲೇ ಇದಕೆ ಒಪ್ಪಿಗೆ ಸಿಕ್ಕಿತ್ತಾದರೂ ಜಾರಿಗೆ ಬಂದಿರಲಿಲ್ಲ.
ಲಿಸ್ಟ್ ಆದ ಮತ್ತು ದೊಡ್ಡ ಅನ್ಲಿಸ್ಟೆಡ್ ಕಂಪನಿಗಳು ಇದರ ಅಧೀನದಲ್ಲಿಬರಲಿವೆ. ಒಂದು ವೇಳೆ ವಂಚನೆ ನಡೆದರೆ ಇತರ ಕಂಪನಿಗಳನ್ನೂ ತನಿಖೆಗೆ ಒಳಪಡಿಸಲು ಸರ್ಕಾರ ಆದೇಶಿಸಬಗುದಾಗಿದೆ. ನಿಯಂತ್ರಣ ಪ್ರಾಧಿಕಾರದಲ್ಲಿ 15 ಸದಸ್ಯರು ಇರಲಿದ್ದಾರೆ.
ಪ್ರಾಧಿಕಾರವು ಲೆಕ್ಕಪರಿಶೋಧಕರ ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲಿದ್ದು, ಒಂದು ವೇಳೆ ಅವರು ತಪ್ಪು ಎಸಗಿದ್ದಲ್ಲಿ ಅವರಿಗೆ ಶಿಕ್ಷೆ ವಿಧಿಸುವ ಅಥವಾ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ಹೊಂದಲಿದೆ. ಇದೇ ವೇಳೆ, ತಪ್ಪಿತಸ್ಥ ಲೆಕ್ಕಪರಿಶೋಧಕರ ಮೇಲೆ 10 ವರ್ಷ ವೃತ್ತಿ ನಿರ್ಬಂಧ ವಿಧಿಸುವ ಹಾಗೂ ದಂಡ ಹಾಕುವ ಅಧಿಕಾರಗಳು ಕೂಡ ಇದಕ್ಕೆ ಪ್ರಾಪ್ತಿಯಾಗಲಿವೆ.
ವ್ಯಕ್ತಿಗಳಾದರೆ ಕನಿಷ್ಠ 1 ಲಕ್ಷ ರು. ಅಥವಾ ಶುಲ್ಕದ 5 ಪಟ್ಟು, ಕಂಪನಿಗಳಾದರೆ ಕನಿಷ್ಠ 10 ಲಕ್ಷ ರು. ಅಥವಾ ಶುಲ್ಕದ 10 ಪಟ್ಟು ದಂಡ ಹಾಕಲಾಗುತ್ತದೆ. ಈವರೆಗೆ ಈ ಅಧಿಕಾರಗಳು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಗೆ (ಐಸಿಎಐ) ಇದ್ದವು. ಸಿಎಫ್ಆರ್ಎ ಸ್ಥಾಪನೆಯಾದರೆ ಐಸಿಎಐ ಅಧಿಕಾರ ಮೊಟಕಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.