ಲಿಂಗಾಯತ ಧರ್ಮದ ಹೋರಾಟ ಮತ್ತೆ ಚುರುಕು ಪಡೆಯುತ್ತಿದೆ. ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿ ಸೆ.24 ಕಲಬುರಗಿಯಲ್ಲಿ ಸಮಾವೇಶ ನಡೆಯಲಿದ್ದು, ಇದೇ ವೇಳೆ ಚಿತ್ರದುರ್ಗದ ಮುರುಘಾ ಮಠದಲ್ಲೂ ಸೆ.28ರಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಕಲಬುರಗಿ/ಚಿತ್ರದುರ್ಗ: ಲಿಂಗಾಯತ ಧರ್ಮದ ಹೋರಾಟ ಮತ್ತೆ ಚುರುಕು ಪಡೆಯುತ್ತಿದೆ. ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿ ಸೆ.24 ಕಲಬುರಗಿಯಲ್ಲಿ ಸಮಾವೇಶ ನಡೆಯಲಿದ್ದು, ಇದೇ ವೇಳೆ ಚಿತ್ರದುರ್ಗದ ಮುರುಘಾ ಮಠದಲ್ಲೂ ಸೆ.28ರಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಕಲಬುರಗಿ ಸಮಾವೇಶದ ಕುರಿತು ಶುಕ್ರವಾರ ಬೀದರ್’ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಡಾ.ಬಸವಲಿಂಗ ಪಟ್ಟದೇವರು ಶ್ರೀಗಳು, ರಾಜ್ಯದಲ್ಲಿ ಲಿಂಗಾಯತ ಚಳವಳಿಗೆ ಬೀದರ್ ಜಿಲ್ಲೆಯೇ ಮೂಲ. ಈಗಾಗಲೇ ಮಹಾರಾಷ್ಟ್ರದ ಲಾತೂರ್‘ನಲ್ಲೂ ಚಳವಳಿ ನಡೆಸಲಾಗಿದೆ. ಪ್ರತ್ಯೇಕ ಧರ್ಮದ ಹೋರಾಟದ ಮುಂದಿನ ಭಾಗವಾಗಿ ಸೆ.24ರಂದು ಕಲಬುರಗಿಯ ಎನ್.ವಿ. ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಸೇರಿ 25 ಸಾವಿರಕ್ಕೂ ಹೆಚ್ಚು ಮಂದಿ ಸೇರಲಿದ್ದಾರೆ. ಇದು ಕಲಬುರಗಿ ಯಲ್ಲಿ ನಡೆಯುತ್ತಿರುವ ನಾಲ್ಕನೇ ರ್ಯಾಲಿ. ಜೈನ, ಸಿಖ್ ಹಾಗೂ ಬೌದ್ಧ ಧರ್ಮದಂತೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಮತ್ತೊಂದೆಡೆ ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುರುಘಾಮಠದ ಡಾ. ಶಿವಮೂರ್ತಿ ಶ್ರೀಗಳು, ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಭಾಗವಾಗಿ ಸೆ.28ರಂದು ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕುರಿತು ಬೃಹತ್ ಸಮಾವೇಶ ಆಯೋಜಿಸಲಾಗುವುದು. ಈ ಸಮಾವೇಶದಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ‘ಸೌಹಾರ್ದ ನಡಿಗೆ ಶರಣ ಸಂಸ್ಕೃತಿ ಕಡೆಗೆ’ ಎಂಬ ಜಾಥಾವೂ ಇರಲಿದೆ ಎಂದರು.