
ಬೆಂಗಳೂರು(ಸೆ.24): ಕಾವೇರಿ ನದಿ ನೀರು ಹಂಚಿಕೆ ವಿವಾದದಿಂದ ವಾಹನ ಮಾಲೀಕರಿಗೆ ನಷ್ಟ ಉಂಟಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡಿನ ಗೃಹ ಸಚಿವರು ಪರಸ್ಪರ ಸೌಹಾರ್ದ ಮಾತುಕತೆ ನಡೆಸಿ ಎರಡೂ ರಾಜ್ಯಗಳ ಗಡಿಗಳ ನಡುವೆ ಸರಕು- ಸೇವೆ ಸಾಗಣೆಗೆ ಮುಕ್ತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾಗಣೆ ಉದ್ಯಮದಾರರ ಸಂಘಗಳು ಒತ್ತಾಯಿಸಿವೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ, ‘‘ಕಾವೇರಿ ನದಿ ನೀರು ಹಂಚಿಕೆ ವಿವಾದದಿಂದಾಗಿ ಎರಡು ರಾಜ್ಯಗಳ ಗಡಿಯಲ್ಲಿ ಸಂಚಾರ ನಿರ್ಬಂಸಿ 20 ದಿನ ಕಳೆದಿದೆ. ಇದರಿಂದ ಸಾಗಣೆ ಉದ್ಯಮದಾರ ವಹಿವಾಟು ತಗ್ಗಿದೆ. ಹೀಗಾಗಿ ನಿತ್ಯ 300 ಕೋಟಿ ನಷ್ಟವಾಗುತ್ತಿದೆ. 20 ದಿನಗಳಲ್ಲಿ 45000 ಕೋಟಿ ನಷ್ಟವಾಗಿದೆ,’’ ಎಂದು ತಿಳಿಸಿದರು.
‘ಇತರೆ ರಾಜ್ಯಗಳಿಗೆ ಪೂರೈಕೆಯಾಗಬೇಕಿದ್ದ ನಾನಾ ತರಕಾರಿ, ಈರುಳ್ಳಿ ಸೇರಿದಂತೆ ಕೋಟ್ಯಂತರ ರು. ವೌಲ್ಯದ ಆಹಾರ ಪದಾರ್ಥಗಳು ಕೊಳೆತು ಹೋಗುವ ಸ್ಥಿತಿಯಲ್ಲಿವೆ. ಇವಲ್ಲದೇ ನೆರೆ ರಾಜ್ಯಗಳಿಂದ ರಾಜ್ಯಕ್ಕೆ, ಕರ್ನಾಟಕದಿಂದ ಅನ್ಯ ರಾಜ್ಯಗಳಿಗೆ ಹತ್ತಿ, ಕೋಳಿ ಮೇವು, ಕೃಷಿ ಉತ್ಪನ್ನಗಳು, ಕೈಗಾರಿಕಾ ಕಚ್ಚಾ ಸಾಮಗ್ರಿಗಳು, ಔಷ ಮತ್ತು ಅಡುಗೆ ಅನಿಲ ಸಾಗಣೆ ಸೇರಿದಂತೆ ಅನೇಕ ಅಗತ್ಯ ವಸ್ತುಗಳು ಸರಬರಾಜಾಗುತ್ತವೆ. ಸಂಚಾರ ಸ್ಥಗಿತಗೊಂಡಿದ್ದರ ಪರಿಣಾಮ ಉದ್ಯಮಕ್ಕೆ ಹೊರೆಯಾಗುತ್ತಿದೆ,’’ ಎಂದು ಅಳಲು ತೋಡಿಕೊಂಡರು.
ಈ ಕುರಿತು ಮುಖ್ಯಮಂತ್ರಿ ಸೇರಿದಂತೆ ಪೊಲೀಸ್ ಆಯುಕ್ತರಿಗೂ ಆಗುತ್ತಿರುವ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗಿದೆ. ಸೆ. 30ರೊಳಗೆ ಎರಡೂ ರಾಜ್ಯಗಳ ಗೃಹ ಸಚಿವರು ತುರ್ತು ಸಭೆ ಕರೆದು ಒಮ್ಮತ ತೀರ್ಮಾನಕ್ಕೆ ಬರಬೇಕು. ಇದೇ ಪರಿಸ್ಥಿತಿ ಮುಂದುವರೆದರೆ ಸಾಗಣೆ ಉದ್ಯಮದಾರರ ಸಂಘಗಳು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗಡಿ ಪ್ರದೇಶಗಳಲ್ಲಿ ಭದ್ರತೆ ಸಡಿಲಗೊಳಿಸಿ ಲಾರಿ, ಟ್ಯಾಕ್ಸಿ, ಬಸ್ ಸಂಚಾರಕ್ಕೆ ಮುಕ್ತಗೊಳಿಸಬೇಕು. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಸೌರ್ಹಾರ್ದವಾಗಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡು ಮುಕ್ತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.