
ನವದೆಹಲಿ: ಹುಬ್ಬಳ್ಳಿಗೆ ತಾವು ಇತ್ತೀಚೆಗೆ ಆಗಮಿಸಿದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ವೇಳೆ ಇನ್ನೇನು ಎಲ್ಲಾ ಮುಗಿದೇ ಹೋಯ್ತು ಎನ್ನಿಸಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಅಂದು ತಾವು ಜೀವ ಭಯ ಎದುರಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ದಿಲ್ಲಿಯಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಜನಾಕ್ರೋಶ ರ್ಯಾಲಿ’ಯಲ್ಲಿ ಮಾತನಾಡಿದ ಅವರು, ‘2-3 ದಿನದ ಹಿಂದೆ ನಾನು ಕರ್ನಾಟಕದ ಹುಬ್ಬಳ್ಳಿಗೆ ವಿಮಾನದಲ್ಲಿ ಹೋಗುತ್ತಿದ್ದೆ.
ವಿಮಾನವು ಹಠಾತ್ತನೆ 8 ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿಯಿತು. ಆಗ ನನಗೆ ಎಲ್ಲಾ ಮುಗಿದೇ ಹೋಯ್ತು ಎನ್ನಿಸಿತ್ತು. ಆದರೆ, ಆ ಕ್ಷಣದಲ್ಲೇ ನಾನು ಮಾನಸ ಸರೋವರ ಯಾತ್ರೆಗೆ ಹೋಗಬೇಕು ಅಂದುಕೊಂಡೆ. ಹೀಗಾಗಿ ಕರ್ನಾಟಕ ಚುನಾವಣೆ ಬಳಿಕ 10-15 ದಿವಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವೆ. ಇದಕ್ಕೆ ಹೋಗಲು ನಿಮ್ಮ (ಕಾರ್ಯಕರ್ತರ) ಅನುಮತಿ ಬೇಡುವೆ’ ಎಂದೂ ರಾಹುಲ್ ಹೇಳಿದರು ಎಂದರು.
ಈ ಹಿಂದೆ ವಿದೇಶಕ್ಕೆ ಹೋಗುವಾಗ ರಾಹುಲ್ ಗಾಂಧಿ ಹೇಳದೇ ಕೇಳದೇ ತಿಂಗಳುಗಟ್ಟಲೆ ನಾಪತ್ತೆಯಾಗಿದ್ದು, ಸಾಕಷ್ಟು ವಾದಕ್ಕೀಡಾಗಿತ್ತು. ಕೈಲಾಸ ಮಾನಸ ಸರೋವರ ಶಿವನ ಸ್ಥಳವಾಗಿದ್ದು, ಇದು ಪ್ರಸ್ತುತ ಚೀನಾ ಹಿಡಿತದಲ್ಲಿರುವ ಟಿಬೆಟ್ ನಲ್ಲಿದೆ.
ಇತ್ತೀಚೆಗೆ ರಾಹುಲ್ ಇದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಬಗ್ಗೆ ಅವರ ಆಪ್ತ ಕೌಶಲ್ ವಿದ್ಯಾರ್ಥಿ ಅವರು ಕರ್ನಾಟಕ ಡಿಜಿಪಿಗೆ ದೂರು ನೀಡಿದ್ದರು. ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಆದರೆ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ವಿಮಾನ ಯಾವುದೇ ತಾಂತ್ರಿಕ ದೋಷ ಹೊಂದಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.