
ಮುಂಬೈ (ಜೂ. 12): ಕಳ್ಳರು ಪೊಲೀಸರನ್ನು ಕಂಡರೆ ಎದ್ದೆನೋ ಬಿದ್ದೆನೋ ಎಂದು ಓಡುತ್ತಾರೆ. ಆದರೆ, ಇಲ್ಲೊಬ್ಬ ಕಳ್ಳ ಸೀದಾ ಪೊಲೀಸರ ಮನೆಗೇ ಕನ್ನ ಹಾಕುತ್ತಿದ್ದ. ಇಂಥದ್ದೊಂದು ಗೀಳು ಹತ್ತಿಸಿಕೊಂಡಿದ್ದ ಮುಂಬೈನ ಜಿಟಿಬಿ ನಗರ ನಿವಾಸಿ ಕಮಲ್ಜಿತ್ ಸಿಂಗ್ (20) ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕಾಲಾಚೌಕೆ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ವೇಳೆ ಆತನನ್ನು ಮೂವರು ಪೊಲೀಸ್ ಕಾನ್ಸ್ಟೇಬಲ್ಗಳು ಬೆನ್ನತ್ತಿ ಹೋಗಿ ಕೋಳ ತೊಡಿಸಿದ್ದಾರೆ. ಕಮಲ್ಜಿತ್ ಸಿಂಗ್ ಬುಧವಾರ ಮುಂಜಾನೆ ಕಾನ್ಸ್ಟೇಬಲ್ ವಿಜಯ್ ಬಾನೆ ಮನೆಗೆ ನುಗ್ಗಿ 60 ಗ್ರಾಮ್ ಚಿನ್ನ ಮತ್ತು 2,800 ಹಣ ಕದ್ದಿದ್ದ. ಬಳಿಕ ಇನ್ನೊಬ್ಬ ಕಾನ್ಸ್ಟೇಬಲ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ. ಆದರೆ, ಅಲ್ಲಿ ಏನೂ ಸಿಗದೇ ಹಿಂದಿರುಗುತ್ತಿರುವಾಗ ಆತನನ್ನು ನೋಡಿದ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಫೀಲ್ಡಿಗೆ ಇಳಿದ ಪೊಲೀಸರು ಕಳ್ಳನನ್ನು ಬಂಧಿಸಿ ಕಂಬಿಗಳ ಹಿಂದೆ ಕಳುಹಿಸಿದ್ದಾರೆ. ಪೊಲೀಸರು ಎಂಬ ಕಾರಣಕ್ಕೆ ಹೇಗೂ ಅವರ ಮನೆಯಲ್ಲಿ ಹೆಚ್ಚಿನ ಭದ್ರತೆ ಇರುವುದಿಲ್ಲ ಹಾಗೂ ಪೊಲೀಸರ ಮನೆ ಬಳಿ ಹೋದರೆ ಯಾರೂ ಅನುಮಾನ ಪಡುವುದಿಲ್ಲ ಎಂಬ ಕಾರಣಕ್ಕೆ ಆತ ಪೊಲೀಸರ ಮನೆಯನ್ನೇ ದೋಚುತ್ತಿದ್ದ. ಇದುವರೆಗೆ ಹೀಗೆ 25ಕ್ಕೂ ಹೆಚ್ಚು ಪೊಲೀಸರ ಮನೆಗೆ ಕನ್ನ ಹಾಕಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.