ಸಚಿವ ಸ್ಥಾನ ವಿಚಾರವಾಗಿ ಪರಸ್ಪರ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಮತ್ತು ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್ ನಡುವಿನ ವೈಮನಸ್ಯ ಕಡಿಮೆಯಾದಂತಿದೆ. ‘ಜಯಮಾಲಾ ಅವರು ನನ್ನಕ್ಕ ಇದ್ದಂತೆ’ ಎಂದು ಸೋಮವಾರವಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಜಯಮಾಲಾ ಅವರು ‘ಲಕ್ಷ್ಮೇ ಹೆಬ್ಬಾಳ್ಕರ್ ಅವರ ಮೇಲೆ ನನಗೆ ಅಪಾರ ಪ್ರೀತಿಯಿದೆ, ಅವರಿಗೆ 2ನೇ ಹಂತದಲ್ಲಿ ಸಚಿವ ಸ್ಥಾನ ಸಿಗಲಿ’ ಎಂದು ಆಶಿಸಿದ್ದಾರೆ.
ಬೆಂಗಳೂರು (ಜೂ. 20): ಸಚಿವ ಸ್ಥಾನ ವಿಚಾರವಾಗಿ ಪರಸ್ಪರ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಮತ್ತು ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್ ನಡುವಿನ ವೈಮನಸ್ಯ ಕಡಿಮೆಯಾದಂತಿದೆ. ‘ಜಯಮಾಲಾ ಅವರು ನನ್ನಕ್ಕ ಇದ್ದಂತೆ’ ಎಂದು ಸೋಮವಾರವಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಜಯಮಾಲಾ ಅವರು ‘ಲಕ್ಷ್ಮೇ ಹೆಬ್ಬಾಳ್ಕರ್ ಅವರ ಮೇಲೆ ನನಗೆ ಅಪಾರ ಪ್ರೀತಿಯಿದೆ, ಅವರಿಗೆ 2ನೇ ಹಂತದಲ್ಲಿ ಸಚಿವ ಸ್ಥಾನ ಸಿಗಲಿ’ ಎಂದು ಆಶಿಸಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ, ನನಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕಾಗಿ ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಡಿದ ಮಾತುಗಳು ಏನೇ ಇರಲಿ, ಅವರು ಕ್ಷಮೆ ಕೇಳಿಯಾಗಿದೆ. ಹಾಗಾಗಿ ಆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಇಲಾಖೆಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ. ಲಕ್ಷ್ಮೇ ಹೆಬ್ಬಾಳ್ಕರ್ ಅವರು ನನ್ನನ್ನು ಅಕ್ಕ ಇದ್ದಂತೆ ಎಂದು ಹೇಳಿದ್ದಾರೆ. ಅವರ ಮೇಲೆ ನನಗೂ ಅಪಾರ ಪ್ರೀತಿ ಇದೆ. ಅವರು ಸಚಿವ ಸ್ಥಾನ ಕೇಳುವುದರಲ್ಲೂ ಧರ್ಮವಿದೆ. ಸಚಿವ ಸಂಪುಟದಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಸ್ಥಾನ ಕೊಟ್ಟರೆ ಸಂತೋಷ. 2ನೇ ಹಂತದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ನ ಹಿರಿಯ ಕಾಂಗ್ರೆಸ್ ಸದಸ್ಯರು ತಮನ್ನು ಸಭಾನಾಯಕಿ ಸ್ಥಾನಕ್ಕೆ ನೇಮಿಸಬಾರದು ಎಂದು ಪಕ್ಷವನ್ನು ಆಗ್ರಹಿಸುತ್ತಿದ್ದಾರಂತೆ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಹೊಸ ಯೋಜನೆ ಬಗ್ಗೆ ಚರ್ಚೆ:
ಬಜೆಟ್ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಸೇರಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಮಹಿಳಾ ಅಭಿವೃದ್ಧಿಗೆ ಎಷ್ಟುಅನುದಾನ ನೀಡಿದರೂ ಸಾಲದು. ಈಗಾಗಲೇ ಇರುವ ಯೋಜನೆಗಳ ಜತೆ ಕೆಲ ಹೊಸ ಯೋಜನೆಗಳನ್ನೂ ಬಜೆಟ್ನಲ್ಲಿ ಸೇರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.