
ನವದೆಹಲಿ: ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಸಿಇಟಿ) ಈ ಮುಂಚಿನಂತೆ ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ಮುಂದು ವರಿಸುವಂತೆ ಈ ಪರೀಕ್ಷೆಗಳನ್ನು ಹಮ್ಮಿಕೊಳ್ಳುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್ಇ) ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದೆ.
ಟಿಸಿಇಟಿಯಿಂದ ಕನ್ನಡ ಸೇರಿದಂತೆ 17 ಭಾಷಾ ಮಾಧ್ಯಮಗಳನ್ನು ತೆಗೆದು ಹಾಕಿ ಕೇವಲ 3 ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಸಿಬಿಎಸ್ಇ ಇತ್ತೀಚೆಗೆ ನಿರ್ಧಾರ ಕೈಗೊಂಡಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಕೇಂದ್ರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು, ಈ ಎಲ್ಲ ಭಾಷೆಗಳಲ್ಲಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದಾಗಿ ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಾವಡೇಕರ್, ಟಿಸಿಇಟಿ ಪರೀಕ್ಷೆಗಳನ್ನು ಎಲ್ಲ ಭಾರತೀಯ ಭಾಷೆಗಳಲ್ಲಿ ಈ ಮೊದಲಿನಂತೆ ನಡೆಸಲಾಗುತ್ತದೆ. ನಾನು ಈ ಬಗ್ಗೆ ಈಗಾಗಲೇ ಸಿಬಿಎಸ್ಇಗೆ ಸೂಚನೆ ನಿಡಿದ್ದೇನೆ. ಎಲ್ಲ 20 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಪ್ರಕಾರ ಇಂಗ್ಲಿಷ್, ಹಿಂದಿ, ಬಾಂಗ್ಲಾ, ಅಸ್ಸಾಮಿ, ಗಾರೋ, ಗುಜರಾತಿ, ಕನ್ನಡ, ಖಾಸಿ, ಮಲಯಾಳಂ, ಮಣಿಪುರಿ, ಮರಾಠಿ, ಮಿಜೋ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು, ಟಿಬೆಟನ್ ಮತ್ತು ಉರ್ದು ಭಾಷೆಗಳಲ್ಲಿ ಸಿಬಿಎಸ್ಇ ಪರೀಕ್ಷೆ ನಡೆಸಲಿದೆ ಎಂದೂ ಜಾವಡೇಕರ್ ವಿವರಿಸಿದ್ದಾರೆ.
ಕನ್ನಡ, ತಮಿಳು ಸೇರಿದಂತೆ 17 ಭಾಷಾ ಮಾಧ್ಯಮಗಳಲ್ಲಿ ಪರೀಕ್ಷೆ ನಡೆಸುವುದಕ್ಕೆ ತಿಲಾಂಜಲಿ ನೀಡುವ ಸಿಬಿಎಸ್ಇ ನಿರ್ಧಾರವನ್ನು ಡಿಎಂಕೆ ಸಂಸದೆ ಕನಿಮೋಳಿ ಸೋಮವಾರ ಬೆಳಗ್ಗೆ ತೀವ್ರವಾಗಿ ವಿರೋಧಿಸಿದ್ದರು. ಇದು ಒಕ್ಕೂಟ ವ್ಯವಸ್ಥೆಗೆ ಹಾಗೂ ಆಯಾ ರಾಜ್ಯಗಳ ಮಾತೃಭಾಷೆಗಳಿಗೆ ಮಾಡುವ ಅನ್ಯಾಯ ಎಂದು ಕಿಡಿಕಾರಿದ್ದರು. ಮಕ್ಕಳಿಗೆ ಹಿಂದಿ ಮತ್ತು ಸಂಸ್ಕೃತವನ್ನು ಹೇರಲಾಗುತ್ತಿದೆ. ಇದು ದೇಶದಲ್ಲಿ ಇನ್ನೊಂದು ಭಾಷಾ ಹೋರಾಟಕ್ಕೆ ನಾಂದಿ ಹಾಡೀತು. ಹಿಂದಿ-ಹಿಂದು-ಹಿಂದುಸ್ತಾನ ನಿರ್ಮಾಣದತ್ತ ಬಿಜೆಪಿಯ ಇನ್ನೊಂದು ಕ್ರಮವಿದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.