
ಕೊಪ್ಪಳ (ಸೆ.02): ವಿದ್ಯಾರ್ಥಿಗಳಿಗೆ ಪಾಠ ಹೇಳುವ ಗುರುವೇ ಹಾದಿ ತಪ್ಪಿದರೆ ಹೇಗೆ? ಕುಡಿದ ಮತ್ತಿನಲ್ಲಿ ಶಿಕ್ಷಕರಿಬ್ಬರು ಬೇಕಾಬಿಟ್ಟಿಯಾಗಿ ವರ್ತಿಸಿ ವಿದ್ಯಾರ್ಥಿಗಳ ಬಗ್ಗೆ ಉಡಾಪೆಯಾಗಿ ಮಾತನಾಡಿರುವ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ನಡೆದಿದೆ.
ಚಿಕ್ಕಮಾದಿನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಸವರಾಜ್ ಹರ್ತಿ ಹಾಗೂ ಕರಿಯಮ್ಮ ಕ್ಯಾಂಪ್ ನ ಶಿವಪ್ಪ ಎಂಬ ಇಬ್ಬರು ಶಿಕ್ಷಕರು ಸಕತ್ ಟೈಟಾಗಿದ್ದಾರೆ. ನಂತರ ತಾವು ತಂದಿದ್ದ ಬೈಕ್ ಹುಡುಕಾಡಿದ್ದಾರೆ. ಕುಡಿದ ಮತ್ತಿನಲ್ಲಿ ತಮ್ಮ ಬೈಕ್ ಗಳನ್ನ ಬಸ್ ಸ್ಟಾಂಡ್ ಹತ್ತಿರ ಬಿಟ್ಟಿರುವುದನ್ನ ಮರೆತು ನಮ್ಮ ಬೈಕ್ ಕಳ್ಳತನವಾಗಿವೆ ಕಂಪ್ಲೇಟ್ ತೆಗೆದುಕೊಳ್ಳಿ ಎಂದು ಕನಕಗಿರಿ ಪೋಲಿಸರಿಗೆ ದುಂಬಾಲು ಬಿದ್ದಿದ್ದಾರೆ. ಬಹಳಷ್ಟು ಕುಡಿದಿದ್ದರಿಂದ ತೂರಾಡುತ್ತಾ ಮಾತನಾಡಿದ್ದಾರೆ. ಅವರು ಶಿಕ್ಷಕರು ಎನ್ನುವದು ಗೊತ್ತಿದ್ದ ಪೋಲಿಸರು ಈಗ ಮಾತನಾಡುವುದು ಬೇಡ, ಬೆಳಿಗ್ಗೆ ಬನ್ನಿ ಎಂದಿದ್ದಾರೆ. ಅಲ್ಲದೇ ನೀವು ಶಿಕ್ಷಕರಾಗಿ ಈ ರೀತಿ ಬರಬಾರದು. ವಿದ್ಯಾರ್ಥಿಗಳು ಶಾಲೆಗೆ ಕುಡಿದು ಬಂದರೆ ನಿಮಗೆ ಸರಿಕಾಣುತ್ತಾ ಎಂದಾಗ ಮತ್ತಿನಲ್ಲಿದ್ದ ಶಿಕ್ಷಕ ನಾಲ್ಕೂವರೆಯಾದ ಮೇಲೆ ವಿದ್ಯಾರ್ಥಿಗಳು ಏನಾದರೂ ಮಾಡಿಕೊಳ್ಳಲಿ ನಮಗೆ ಸಂಬಂಧವಿಲ್ಲ ಎಂದು ಉಡಾಪೆಯಾಗಿ ಮಾತನಾಡಿದ್ದಾರೆ. ಇನ್ನು ಬಸ್'ಸ್ಟಾಂಡ್ ಬಳಿ ಇದ್ದ ಬೈಕ್ ಗಳನ್ನ ಪೊಲಿಸರು ಠಾಣೆಗೆ ತಂದು ಇಟ್ಟಿದ್ದಾರೆ. ಮರುದಿನ ಪೋಲಿಸ್ ಠಾಣೆಗೆ ಬಂದ ಈ ಇಬ್ಬರು ಶಿಕ್ಷಕರು ದಂಡ ಕಟ್ಟಿ ತಮ್ಮ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಈಗ ಶಿಕ್ಷಕರ ಈ ವಿಡಿಯೋ ವೈರಲ್ ಆಗಿದ್ದು ಜನ ಛೀಮಾರಿ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.