ಮುದ್ದೇಬಿಹಾಳ ತಾಲೂಕಿನ ತುಂಬಗಿ ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಟ್ಟಡ ದುರಸ್ತಿಗೆ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ₹ 35 ಲಕ್ಷ ಬಿಡುಗಡೆಗೊಳಿಸುವ ಭರವಸೆ ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.
ತಾಳಿಕೋಟೆ (ಏ.20): ಮುದ್ದೇಬಿಹಾಳ ತಾಲೂಕಿನ ತುಂಬಗಿ ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಟ್ಟಡ ದುರಸ್ತಿಗೆ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ₹ 35 ಲಕ್ಷ ಬಿಡುಗಡೆಗೊಳಿಸುವ ಭರವಸೆ ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.
‘ಸುವರ್ಣ ನ್ಯೂಸ್’ನಲ್ಲಿ ‘ಹಲೋ ಮಿನಿಸ್ಟರ್’ ಕಾರ್ಯಕ್ರಮದಲ್ಲಿ ಸಚಿವ ಆಂಜನೇಯ ಅವರು ಪಾಲ್ಗೊಂಡಿದ್ದಾಗ ಜಿಪಂ ಸದಸ್ಯ ಬಸನಗೌಡ ವಣಕ್ಯಾಳ ಅವರು ತುಂಬಗಿ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ದುಸ್ಥಿತಿ ಹಾಗೂ ಮೂಲ ಸೌಕರ್ಯಗಳ ಕೊರತೆ ಕುರಿತು ಗಮನ ಸೆಳೆದಿದ್ದರು. ಜತೆಗೆ, ಕೂಡಲೇ ಕ್ರಮಕೈಗೊಂಡು ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಸಚಿವರು ಈಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಅದರಂತೆ ವಿದ್ಯಾರ್ಥಿ ನಿಲಯಕ್ಕೆ ಬೇಕಿರುವ ಆವರಣ ಗೋಡೆ, ಗೇಟ್ ನಿರ್ಮಾಣ ಮಾಡಬೇಕು, ಚಾವಣಿ, ಕಿಟಕಿ-ಬಾಗಿಲು, ಬೋರ್ವೆಲ್ ಮೋಟಾರ್, ನೀರು ಸಂಗ್ರಹಣಾ ತೊಟ್ಟಿ, ಸೋಲಾರ್ ವಾಟರ್ ಹೀಟರ್ ಮತ್ತು ಲೈಟ್, ಕಾಟ್ ಮತ್ತು ಬೆಡ್, ಶೌಚಾಲಯ ಮತ್ತು ಸ್ನಾನದ ಕೊಠಡಿಗಳನ್ನು ದುರಸ್ತಿಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹಿಂದುಳಿದ ಕಲ್ಯಾಣ ಇಲಾಖೆಯ ಆಯುಕ್ತರು ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಜತೆಗೆ, ಈ ಕೆಲಸದ ಕುರಿತು ವರದಿ ನೀಡುವಂತೆಯೂ ತಿಳಿಸಿದ್ದಾರೆ.