
ನವದೆಹಲಿ(ಜು.11): ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಗೋ ಮಾರಾಟ ನಿರ್ಬಂಧ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
ನೂತನ ಗೋ ಮಾರಾಟ ನಿಯಮಗಳಿಗೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ದೇಶಾದ್ಯಂತ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಕಾಯ್ದೆಯನ್ನು ಪುನರ್ ಪರಿಶೀಲಿಸಿ, ಇದರಲ್ಲಿರುವ ಕೆಲ ಅಂಶಗಳಲ್ಲಿ ತಿದ್ದುಪಡಿ ತರುತ್ತೇವೆ ಎಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್'ಗೆ ಕೇಂದ್ರ ತಿಳಿಸಿತು.
ಗೋ ಮಾರಾಟ ನಿರ್ಬಂಧಕ್ಕೆ ಕೇಂದ್ರ ಹೊರಡಿಸಿದ ಅಧಿಸೂಚನೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಸುಪ್ರೀಂಕೋರ್ಟ್ ರಾಷ್ಟ್ರವ್ಯಾಪಿ ಈ ಆದೇಶವನ್ನು ವಿಸ್ತರಿಸಿದೆ. "ಮದ್ರಾಸ್ ಹೈಕೋರ್ಟ್'ನ ಮಧ್ಯಂತರ ನಿರ್ದೇಶನವು ಇಡೀ ದೇಶಕ್ಕೆ ವಿಸ್ತರಿಸಬಹುದು" ಎಂದು ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಮತ್ತು ನ್ಯಾ| ಡಿವೈ ಚಂದ್ರಚೂಡ್ ಅವರಿರುವ ಸುಪ್ರೀಕೋರ್ಟ್ ಪೀಠವು ತೀರ್ಪು ನೀಡಿತು.
ಕಳೆದ ತಿಂಗಳಷ್ಟೇ ಈ ಕಾಯ್ದೆ ಜಾರಿಗೊಳಿಸಿದ್ದ ಸರ್ಕಾರದ ಈ ನಿರ್ಧಾರಕ್ಕೆ ದೇಶದಾದ್ಯಂತ ಪರ ವಿರೋಧಗಳ ಕೂಗು ಕೇಳಿ ಬಂದಿತ್ತು. ವಧಾಗೃಹಗಳಿಗೆ ಗೋವುಗಳ ಮಾರಾಟಕ್ಕೆ ಕೇಂದ್ರ ಸರಕಾರ ಹಲವು ರೀತಿಯ ನಿರ್ಬಂಧಗಳನ್ನು ಹೇರಿ ಮೇ 25ರಂದು ಅಧಿಸೂಚನೆ ಹೊರಡಿಸಿತ್ತು. ಇದು ದೇಶದ ಲಕ್ಷ ಕೋಟಿ ಮಾಂಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ ಬಡ ರೈತರಿಗೆ ಇದು ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂಬ ಕಾರಣಗಳಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಗೋಮಾಂಸವನ್ನೇ ನಿಷೇಧಿಸುವ ಹುನ್ನಾರ ಇದರಲ್ಲಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.