
ನವದೆಹಲಿ(ಮೇ.09): ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ಅವರ ಪತಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ. ‘ಸಾವಿಗೆ ಸಂಬಂಧಿಸಿದಂತೆ ತರೂರ್ ಏನೋ ಮುಚ್ಚಿಡುತ್ತಿದ್ದಾರೆ' ಎಂದು ತರೂರ್ ಅವರ ಮನೆಕೆಲಸದಾಳು ನಾರಾಯಣ್ ದೂರಿದ್ದಾನೆ.
‘2014ರ ಜ.17ರಂದು ನನ್ನನ್ನು ಲೀಲಾ ಪ್ಯಾಲೇಸ್ ಹೋಟೆಲ್ನಿಂದ ತರೂರ್ ಕೆಲ ಹೊತ್ತು ಹೊರಗೆ ಕಳಿಸಿದ್ದರು. ಆಗ ಸುನಂದಾ ಲೀಲಾ ಹೋಟೆಲ್ನ 307 ಸಂಖ್ಯೆಯ ಕೊಠಡಿಯಲ್ಲಿ ಜೀವಂತವಾಗಿದ್ದರು. ವಾಪಸ್ ಬಂದಾಗ ಸುನಂದಾ ಭೇಟಿ ಮಾಡಲು ನನಗೆ ತರೂರ್ ಅವಕಾಶ ನೀಡಲಿಲ್ಲ. ಸುನಂದಾ ಮಲಗಿದ್ದಾರೆ ಎಂದಷ್ಟೇ ಹೇಳಿದರು. ಆದರೆ ಬಳಿಕ ಸುನಂದಾ ಅವರನ್ನು 345ನೇ ಸಂಖ್ಯೆಯ ಕೊಠಡಿಗೆ ಶಿಫ್ಟ್ ಮಾಡಲಾಗಿತ್ತು. ಅಷ್ಟೊತ್ತಿಗೆ ಅವರು ಸಾವನ್ನಪ್ಪಿದ್ದರು ಎಂದು ತಿಳಿದುಬಂತು' ಎಂದು ನಾರಾಯಣ್ ಹೇಳಿದ್ದಾಗಿ ‘ರಿಪಬ್ಲಿಕ್ ಟೀವಿ' ವರದಿ ಮಾಡಿದೆ.
ಅಲ್ಲದೆ, ಇಡೀ ರಾತ್ರಿ ಶಶಿ-ಸುನಂದಾ ಜಗಳವಾಡುತ್ತಿದ್ದರು ಎಂದೂ ನಾರಾಯಣ ಹೇಳಿದ್ದಾನೆ.ಈ ಸಂಬಂಧ ಸುನಂದಾ ಸಾವಿಗೆ ಮುನ್ನ ಧ್ವನಿಮುದ್ರಿಸಿಕೊಳ್ಳಲಾದ 19 ಟೇಪ್ಗಳು ತನ್ನ ಬಳಿ ಇವೆ. ಅವನ್ನು ದಿಲ್ಲಿ ಪೊಲೀಸರಿಗೆ ನೀಡಿರುವುದಾಗಿ ವಾಹಿನಿ ತಿಳಿಸಿದೆ.
‘ಹೀಗಾಗಿ 307ನೇ ರೂಮ್ನಲ್ಲಿ ಜೀವಂತವಾಗಿದ್ದ ಸುನಂದಾ 345ನೇ ಕೋಣೆಯಲ್ಲಿ ಹೇಗೆ ಮೃತ ಅವಸ್ಥೆಯಲ್ಲಿ ಸಿಕ್ಕರು? ಅವರ ಶವ ವರ್ಗ ಮಾಡಿದ್ಯಾರು? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ. ನಾರಾಯಣ್ ಮಾತಿನಿಂದ ಸುನಂದಾ ಸಾವಿನ ಬಗ್ಗೆ ತರೂರ್ ಏನೋ ಮುಚ್ಚಿಡುತ್ತಿದ್ದುದು ಸಾಬೀತಾಗಿದೆ. ಈ ಬಗ್ಗೆ ಪುನಃ ತನಿಖೆಯಾಗಬೇಕು' ಎಂದು ಕೆಲವು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಅಲ್ಲದೆ, ದಿಲ್ಲಿ ಪೊಲೀಸರ ಈವರೆಗಿನ ತನಿಖೆಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.