
ಚಿತ್ರರಂಗ ಅಂದ ಮೇಲೆ ಸಿನಿಮಾಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಅದರಲ್ಲಿ ಕೆಲವೇ ಕೆಲವು ಸಿನಿಮಾಗಳು ವಿಪರೀತ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸುತ್ತವೆ. ಹಾಗೆ ಶುರುವಾಗುವ ಮೊದಲೆ ನಿರೀಕ್ಷೆ ಹುಟ್ಟಿಸಿದ ಸಿನಿಮಾದ ಹೆಸರು ‘ಥಗ್ಸ್ ಆಫ್ ಮಾಲ್ಗುಡಿ.’ ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯದಲ್ಲಿ ಈ ಸಿನಿಮಾ ಮೂಡಿ ಬರಲಿದೆ ಮತ್ತು ಕಿಚ್ಚ ಸುದೀಪ್ ಇದರಲ್ಲಿ ದರೋಡೆಕೋರರ ತಂಡದ ನಾಯಕ ಆಗಿರುತ್ತಾನೆ ಅನ್ನುವುದು ಸಿನಿಮಾ ವ್ಯಾಮೋಹಿಗಳಲ್ಲಿ ರೋಮಾಂಚನ ಹುಟ್ಟುಹಾಕಿತ್ತು. ಆದರೆ ಈಗ ಆ ರೋಮಾಂಚನದ ಗುಳ್ಳೆ ಒಡೆಯುವ ಸಂದರ್ಭ ಬಂದಾಗಿದೆ. ‘ಥಗ್ಸ್ ಆಫ್ ಮಾಲ್ಗುಡಿ’ ಸಿನಿಮಾದ ಕತೆ ಶುರುವಾಗುವ ಮೊದಲೇ ಮುಗಿದಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ‘ಥಗ್ಸ್ ಆಫ್ ಮಾಲ್ಗುಡಿ’ ಸಿನಿಮಾ ಆಗುವುದಿಲ್ಲ ಎಂದಿದ್ದರು. ಆದರೆ ಆ ಸುದ್ದಿಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದಾಗಿ ಕೆಲವೇ ದಿನಗಳಲ್ಲಿ ಸುದೀಪ್ ಟ್ಟಿಟ್ಟರ್ನಲ್ಲೇ ಈ ಸಂಗತಿಯನ್ನು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸುದೀಪ್ ಅವರ ‘ಪೈಲ್ವಾನ್’ ಸಿನಿಮಾದ ಪೋಸ್ಟರ್. ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾದ ಕೂಡಲೇ ರಕ್ಷಿತ್ ಶೆಟ್ಟಿ ಶುಭ ಹಾರೈಸಿ ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅವರಿಬ್ಬರ ಮಾತುಕತೆಗೆ ನಾಂದಿ ಹಾಡಿತು. ಮೊದಲು ರಕ್ಷಿತ್ ಪೋಸ್ಟರನ್ನು ಮೆಚ್ಚಿಕೊಂಡು ಶುಭಕೋರುತ್ತಾ, ಸುದೀಪ್ ಅವರಿಂದ ಆಗದೇ ಇರುವುದು ಏನೂ ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ರಕ್ಷಿತ್ಗೆ ತಮಾಷೆ ಮಾಡುತ್ತಾರೆ- ‘ಇಲ್ಲ ಇಲ್ಲ, ನನ್ನಿಂದ ಸಾಧಿಸಲಿಕ್ಕಾಗದೇ ಇರುವುದು ಒಂದಿದೆ. ಅದು ಥಗ್ಸ್ ಆಫ್ ಮಾಲ್ಗುಡಿ’.
ಆ ಸಾಲಿನಲ್ಲಿ ಒಂದು ಕಣ್ಣೀರು ಹಾಕೋ ಥರದ ತಮಾಷೆ ಇಮೋಜಿಯನ್ನೂ ಹಾಕಿದ್ದರು. ಅದನ್ನು ನೋಡಿದ ರಕ್ಷಿತ್ ಶೆಟ್ಟಿ ನಾಚಿಕೆಯ ಇಮೋಜಿ ಹಾಕಿ, ‘ನಾನಿನ್ನೂ ಥಗ್ಸ್ ಆಫ್ ಮಾಲ್ಗುಡಿ ಸಿನಿಮಾ ಬಿಟ್ಟಿಲ್ಲ’ ಎಂದು ಬರೆದರು. ಆದರೆ ಸುದೀಪ್ ಮಾತ್ರ ನೇರ ದಿಟ್ಟ ನಿರಂತರ. ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ ಎನ್ನುವಂತೆ, ‘ನೀವು ಬೇಕಾದರೆ ಸಿನಿಮಾ ಕೈಗೆತ್ತಿಕೊಳ್ಳಿ ಸರ್. ನನ್ನಿಂದ ಸಾಧ್ಯವಿಲ್ಲ. ಹೇಳಿದ್ದೆಲ್ಲಾ ಮುಗಿಯಿತು. ತುಂಬು ಪ್ರೀತಿ’ ಎಂದು ಬರೆದು ಹಾಕಿದರು. ರಕ್ಷಿತ್ ಮಾತೇ ಇಲ್ಲ ಎಂದು ಮತ್ತೊಂದು ಶುಭ ಹಾರೈಕೆಯ ಸಾಲು ಬರೆದು ಸುಮ್ಮನಾದರು. ಪರಿಸ್ಥಿತಿ ಹೀಗಾಗಿದೆ. ಇದಕ್ಕೆ ಕಾರಣ ಏನು ಅಂತ ಹುಡುಕುತ್ತಾ ಹೋದರೆ ಪ್ರೊಜೆಕ್ಟ್ ತಡವಾಗಿದ್ದೇ ಇದಕ್ಕೆ ಕಾರಣ ಎನ್ನುತ್ತವೆ ಮೂಲಗಳು. ರಕ್ಷಿತ್ ಶೆಟ್ಟಿ ಈ ಸಿನಿಮಾ ಅದ್ಭುತವಾಗಿ ಮೂಡಿಬರಬೇಕು ಅನ್ನುವ ಕಾರಣಕ್ಕೆ ಭಾರತದ ಥಗ್'ಗಳ ಇತಿಹಾಸವನ್ನೆಲ್ಲಾ ಓದಿಕೊಳ್ಳುತ್ತಿದ್ದರು. ಅದರ ಜೊತೆಗೆ ‘ಕಿರಿಕ್ ಪಾರ್ಟಿ’, ‘ಶ್ರೀಮನ್ನಾರಾಯಣ’ ಸಿನಿಮಾಗಳಿಂದಾಗಿ ಥಗ್ಸ್ ಸ್ಕ್ರಿಪ್ಟ್ ಬರೆಯಲು ಸಾಧ್ಯವಾಗಿರಲಿಲ್ಲ. ಸಿನಿಮಾ ಘೋಷಣೆಯಾಗಿ ತುಂಬಾ ಸಮಯವಾದರೂ ಇನ್ನೂ ಸಿನಿಮಾ ಶುರುವಾಗದ್ದರಿಂದ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಇವರಿಬ್ಬರ ಅಭಿಮಾನಿಗಳಿಗೂ ಇದರಿಂದ ನೋವಾಗಲಿದೆ ಅನ್ನುವುದು ಸತ್ಯ.
-ಸಿನಿವಾರ್ತೆ, ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.