ಶಿವಾನಂದ ಸರ್ಕಲ್‌ ಸ್ಟೀಲ್‌ ಬ್ರಿಡ್ಜ್‌'ಗೆ ಸಚಿವ ಸಂಪುಟ ಒಪ್ಪಿಗೆ

By Suvarna Web DeskFirst Published Jun 8, 2017, 11:29 AM IST
Highlights

ಪ್ರಮುಖ ನಿರ್ಣಯಗಳು:

ನಮ್ಮ ಹೊಲ, ನಮ್ಮ ಹಾದಿ ಯೋಜನೆ ಜಾರಿಗೆ ರೂ.100 ಕೋಟಿ ಬಿಡುಗಡೆ
ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ರೂ.175 ಕೋಟಿ ಬಿಡುಗಡೆ
ಬೆಂಗಳೂರಿನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ 5 ಎಕರೆ ಸರ್ಕಾರಿ ಜಾಗದಲ್ಲಿ ರೂ.82 ಕೋಟಿ ವೆಚ್ಚದಲ್ಲಿ ಡಾ.ಬಾಬು ಜಗಜೀವನ ರಾಮ್‌ ಸಂಶೋಧನಾ ಕೇಂದ್ರ ಸ್ಥಾಪನೆ
ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಕೆಎಸ್ಸಾರ್ಟಿಸಿ ನೀಡಿರುವ ಜಾಗದ ಗುತ್ತಿಗೆ ವಿಸ್ತರಣೆ ಮತ್ತು ನಿವೇಶನ ಸೌಲಭ್ಯಕ್ಕೆ ಜಮೀನು ಹಂಚಿಕೆ ಮಾಡುವುದು.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರ ಮತ್ತೊಂದು ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣಕ್ಕೆ ಮುಂದಾಗಿದೆ.

ನಗರದ ಚಾಲುಕ್ಯ ವೃತ್ತದಿಂದ ಆಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ ರೂ.2 ಸಾವಿರ ಕೋಟಿ ವೆಚ್ಚದ ಸ್ಟೀಲ್‌ ಬ್ರಿಡ್ಜ್‌ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಈಗ ಅದೇ ಮಾದರಿಯ ಸಣ್ಣ ಯೋಜನೆಯನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಶಿವಾನಂದ ವೃತ್ತದಿಂದ ಸುಮಾರು ರೂ.19.85 ಕೋಟಿ ವೆಚ್ಚದಲ್ಲಿ ಸ್ಟೀಲ್‌ ಬ್ರಿಡ್ಜ್‌ ನಿರ್ಮಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜನಾರ್ದನ ಹೊಟೇಲ್‌ ಮಾರ್ಗವಾಗಿ ಗಾಂಧೀ ಭವನ ರಸ್ತೆವರೆಗೂ ಮೇಲು ಸೇತುವೆ ಹಾದು ಹೋಗಲಿದ್ದು, ಇದರ ನಿರ್ಮಾಣ ಕಾಮಗಾರಿಯನ್ನು ಸದ್ಯದಲ್ಲೇ ಆರಂಭಿಸಲು ಆಸಕ್ತಿ ತೋರಿಸಲಾಗಿದೆ. ಈ ಯೋಜನೆಗೆ 2016ರಲ್ಲೇ ಪ್ರಸ್ತಾಪಿಸಲಾಗಿತ್ತಾ ದರೂ ಅಂದು ಟೆಂಡರ್‌ಗೆ ಯಾವುದೇ ಸಂಸ್ಥೆಗಳು ಪ್ರತಿಕ್ರಿಯೆ ತೋರಿಸಿರಲಿಲ್ಲ. ಅಷ್ಟಕೂ ಇದನ್ನು ಸುಮಾರು ರೂ.45 ಕೋಟಿ ವೆಚ್ಚದಲ್ಲಿ ರೂಪಿಸಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಈಗ ಬರೀ ರೂ.19 ಕೋಟಿಗೆ ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣಕ್ಕೆ ದ್ವಿಪಥ: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಬಾಗಲೂರು- ಬೂದಿಗೆರೆ ರಸ್ತೆ 9 ಕಿ.ಮೀ. ವರೆಗಿನ ಉದ್ದದ ರಸ್ತೆಯನ್ನು ದ್ವಿಪಥವಾಗಿ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ. ರೂ.12.33 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊ ಳಿಸಲಾಗುತ್ತಿದ್ದು, ಇದಕ್ಕೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ರೋರಿಕ್‌ ಮತ್ತು ದೇವಿಕಾ ರಾಣಿ ಎಸ್ಟೇಟ್‌ನ ವಿಶ್ವಸ್ಥ ಮಂಡಳಿಗೆ ರಷ್ಯಾದ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸದಿರಲು ಸರ್ಕಾರ ನಿರ್ಧರಿಸಿದೆ. ಈ ಸಂಸ್ಥೆಯ ಆಡಳಿತ ಮಂಡಳಿಗೆ 4 ಮಂದಿ ರಷ್ಯಾ ಪ್ರತಿನಿಧಿಗಳಿದ್ದು, ಇತ್ತೀಚಿಗೆ ರಷ್ಯಾ ಪ್ರತಿನಿಧಿಗಳ ನೇಮಕ ಆಗುತ್ತಿರಲಿಲ್ಲ. ಇದಕ್ಕೆ ಹೈಕೋರ್ಟ್‌ ಕೂಡ ಆಕ್ಷೇಪಿಸಿತ್ತು. ಆದ್ದರಿಂದ ನ್ಯಾಯಾಲಯ ಆದೇಶದಂತೆ ರಷ್ಯಾ ಪ್ರತಿನಿಧಿಗಳನ್ನು ಸೇರಿಸದಿರಲು ನಿರ್ಧರಿಸಲಾಗಿದೆ. ಇದಕ್ಕಾಗಿ ರೋರಿಕ್‌ ಎಸ್ಟೇಟ್‌ ಅಧಿನಿಯಮ 1966ರ 21ನೇ ನಿಯಮಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಅಡುಗೆ ಮನೆಗೆ 28 ಕೋಟಿ: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್‌ಗೆ ಅಡುಗೆ ಮನೆ ನಿರ್ಮಾಣಕ್ಕೆ ರೂ. 28.50 ಕೋಟಿ ಬಿಡುಗಡೆ ಮಾಡ ಲು ಸಂಪುಟ ನಿರ್ಧರಿಸಿದೆ. ಕ್ಷೇತ್ರಕ್ಕೆ ತಲಾ ಒಂದು ಅಡುಗೆ ಮನೆಯಂತೆ 28 ಅಡುಗೆ ಮನೆಗಳನ್ನು ನಿರ್ಮಿಸಲಾಗುತ್ತದೆ. ಒಂದು ಅಡುಗೆ ಮನೆಗೆ ಸುಮಾರು ರೂ.28 ಲಕ್ಷಕ್ಕೂ ಅಧಿಕ ವೆಚ್ಚ ಮಾಡಲಾಗುತ್ತದೆ. ಇದರ ಗುತ್ತಿಗೆಯನ್ನು ಕೆಇಎಫ್‌ ಎಂಬ ಬೆಂಗಳೂರು ಮೂಲದ ಸಂಸ್ಥೆಗೆ ನೀಡಲಾಗಿದೆ. ಈ ಸಂಸ್ಥೆ ಪ್ರತಿ ಕ್ಷೇತ್ರದಲ್ಲೂ ಅಡುಗೆ ಮನೆ ಕಟ್ಟಡ ಮತ್ತು ಅಗತ್ಯ ಉಪಕರಣ, ಸೌಲಭ್ಯಗಳನ್ನು ಒದಗಿಸಲಿದೆ. ಒಟ್ಟಾರೆ ಆ.15ರ ವೇಳೆಗೆ ಅಡುಗೆ ಮನೆ ಮತ್ತು ಅದರ ವ್ಯಾಪ್ತಿಯ ಕ್ಯಾಂಟೀನ್‌ಗಳು ಸಿದ್ಧವಾ ಗಿರುವಂತೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಂಪುಟದಲ್ಲಿ ಚರ್ಚಿಸಲಾಗಿದೆ.

(ಸಾಂದರ್ಭಿಕ ಚಿತ್ರ)

click me!