
ಬೆಂಗಳೂರು: ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಅಧಿಕಾರಿಗಳ ಕೆಂಗಣ್ಣಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಕೇಂದ್ರ ಗುರಿಯಾಗಿದೆ.
ಬುಧವಾರ ಮಧ್ಯಾಹ್ನ ವಸಂತನಗರದ ಗುರುನಾನಕ್ ಭವನ ರಂಗಮಂದಿರದಲ್ಲಿರುವ ರಾಷ್ಟ್ರೀಯ ನಾಟಕ ಶಾಲೆಗೆ ಕ್ರೀಡಾ ಇಲಾಖೆಯ ಅಧಿಕಾರಿಗಳು ಏಕಾಏಕಿ ನುಗ್ಗಿ ರಂಗಪರಿಕರಗಳನ್ನು ರಸ್ತೆಗೆ ಹಾಕಿದ್ದಾರೆ. ಎನ್'ಎಸ್'ಡಿ ಕೇಂದ್ರಕ್ಕೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕ್ರೀಡಾ ಇಲಾಖೆ ಅಧಿಕಾರಿಗಳು ರಂಗ ಪರಿಕರಗಳನ್ನು ಬೀದಿಗೆ ಹಾಕಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಅಲ್ಲದೆ ರಂಗಭೂಮಿ ಹಾಗೂ ರಂಗಕರ್ಮಿಗಳನ್ನು ಅವಮಾನಿಸಿರುವ ಅಧಿಕಾರಿಗಳ ವಿರುದ್ಧ ರಂಗ ಜಗತ್ತು ಆಕ್ರೋಶ ವ್ಯಕ್ತಪಡಿಸಿದೆ.
ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆ ಅಧಿಕಾರಿಗಳ ವರ್ತನೆ ವಿರುದ್ಧ ಎನ್'ಎಸ್'ಡಿ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ರಂಗಕರ್ಮಿಗಳು ಬುಧವಾರ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಕಳೆದ 6 ತಿಂಗಳಿನಿಂದ ಬಾಡಿಗೆ ಕಟ್ಟದಿರುವುದನ್ನೇ ನೆಪಮಾಡಿಕೊಂಡ ಅಧಿಕಾರಿಗಳು ರಾಜ್ಯಕ್ಕೆ ದೊಡ್ಡ ಕಲಾಕೇಂದ್ರವಾಗಿದ್ದ ರಾಷ್ಟ್ರಿಯ ನಾಟಕ ಶಾಲೆಯ ಕಲಾವಿದರನ್ನು ಹೊರಹಾಕಿ ಅವಮಾನಿಸಿರುವುದು ರಂಗಕರ್ಮಿಗಳ ಸ್ವಾಭಿಮಾನವನ್ನು ಕೆರಳಿಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬುಧವಾರ ಬೆಳಗ್ಗೆ 7.30ಕ್ಕೆ ಕ್ರೀಡಾ ಇಲಾಖೆಯ 4-5 ಅಧಿಕಾರಿಗಳು ಹಾಗೂ 200 ಸಿಬ್ಬಂದಿ ಬಂದು ಬಾಗಿಲು ಒಡೆದು 4ರಿಂದ 5 ಲಕ್ಷ ರು.ಮೌಲ್ಯದ ರಂಗ ಪರಿಕರಗಳನ್ನು ರಸ್ತೆಯಲ್ಲಿ ತಂದಿಟ್ಟರು. ಇದರಿಂದ ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ರಂಗಭೂಮಿಗೆ ಸಂಬಂಧಿಸಿದ ದಾಖಲೆಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ರಾತ್ರಿ 8ರ ನಂತರ ಸುರಿದ ಮಳೆಯಿಂದಾಗಿ ಲಕ್ಷಾಂತರ ರು.ಗಳ ರಂಗಪರಿಕರಗಳು ಹಾಳಾಗಿವೆ. ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ಗೋವಾ, ಸೀಮಾಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ 20 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ಇಡೀ ಈ ವಿದ್ಯಾರ್ಥಿಗಳು, ಎನ್'ಎಸ್'ಡಿ ಕೇಂದ್ರದ ಪದಾಧಿಕಾರಿ ಗಳು ಹಾಗೂ ರಂಗಭೂಮಿ ಕಲಾವಿದರು, ರಂಗ ಸಂಘಟಕರು ಪಂಜು ಹಿಡಿದು ಪ್ರತಿಭಟನೆ ನಡೆಸಿದರು.
ಕಾರಣವೇನು? ಎನ್'ಎಸ್'ಡಿ ಕೇಂದ್ರ ಗುರುನಾನಕ್ ಭವನ ರಂಗಮಂದಿರಕ್ಕೆ ಕಳೆದ ಹಲವು ವರ್ಷಗಳಿಂದ ಕೇವಲ ₹20 ಸಾವಿರ ಗಳನ್ನು ಬಾಡಿಗೆ ಪಾವತಿಸುತ್ತಿತ್ತು. ಆದರೆ 6 ತಿಂಗಳ ಹಿಂದೆ 55 ಸಾವಿರ ಬಾಡಿಗೆ ಹೆಚ್ಚಳ ಮಾಡಲಾಗಿತ್ತು. ಈ ನಡುವೆ ಬಾಡಿಗೆ ಸೇರಿದಂತೆ ಉಳಿದ ಖರ್ಚು ವೆಚ್ಚ ₹1.50 ಲಕ್ಷ ದಾಟಿದ್ದು, ಅಷ್ಟು ಮೊತ್ತದ ಹಣ ಭರಿಸಲು ಕಷ್ಟ ಸಾಧ್ಯ. ರಾಜ್ಯ ಸರ್ಕಾರ ರಾಷ್ಟ್ರೀಯ ನಾಟಕ ಶಾಲೆಯ ಕೇಂದ್ರಕ್ಕಾಗಿ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 5 ಎಕರೆ ಜಾಗ ನೀಡಿದೆ. ಸದ್ಯ ಅಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ
ನಿಲಯವನ್ನು ತೆರೆಯಲಾಗಿದೆ. ಇನ್ನೂ ಯೋಗ ಕೊಠಡಿ, ಆಡಳಿತ ಕಚೇರಿ ಸೇರಿದಂತೆ ಹಲವು ಕೇಂದ್ರಗಳನ್ನು ಅಲ್ಲಿ ತೆರೆಯಬೇಕು. ಹೀಗಾಗಿ ಗುರುನಾನಕ್ ಭವನವನ್ನು 30 ವರ್ಷಗಳ ಕಾಲ ಸರ್ಕಾರ ಎನ್'ಎಸ್'ಡಿಗೆ ಗುತ್ತಿಗೆ ನೀಡಬೇಕು ಎಂದು ಎನ್'ಎಸ್'ಡಿಯ ನಿರ್ದೇಶಕ ಸಿ.ಬಸವಲಿಂಗಯ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.