
ಬೆಂಗಳೂರು(ಜೂನ್ 07): ಮಹಿಳಾ ಪಿಎಸ್'ಐ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಆರೋಪವನ್ನು ರಾಯಚೂರು ಗ್ರಾಮಾಂತರ ಬಿಜೆಪಿ ಶಾಸಕ ತಿಪ್ಪರಾಜು ಸಾರಾಸಗಟಾಗಿ ನಿರಾಕರಿಸಿದ್ದಾರೆ. ರಾಜಕೀಯವಾಗಿ ಬೆಳೆಯುತ್ತಿರುವ ತನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಇದು ಎಂದು ತಿಪ್ಪರಾಜು ಹವಾಲ್ದಾರ್ ಬಣ್ಣಿಸಿದ್ದಾರೆ. ತಾನು ಪತ್ನಿಯೊಂದಿಗೆ ಅನ್ಯೋನ್ಯವಾಗಿರುವುದಾಗಿಯೂ, ಬೇರಾರೊಂದಿಗೂ ತಾನು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂದು ಬಿಜೆಪಿ ಶಾಸಕ ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?
"ನನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾರೆ. ಮಹಿಳಾ ಪಿಎಸ್'ಐ ಬೇಬಿ ವಾಲೇಕರ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ. ನನ್ನ ಗಂಡನನ್ನು ನನಗೆ ಕೊಡಿಸಿ..." ಎಂದು ಸೌಮ್ಯ ಹೆಸರಿನಲ್ಲಿ ಕೈಬರಹವಿದ್ದ ಪತ್ರವೊಂದು ಮಹಿಳಾ ಆಯೋಗಕ್ಕೆ ಬಂದಿದೆ. ಮೂರು ತಿಂಗಳ ಹಿಂದೆ ಈ ಪತ್ರವನ್ನು ಕಳುಹಿಸಲಾಗಿದೆ. ಇದು ಮಾಧ್ಯಮಗಳಲ್ಲಿ ಈಗ ಬೆಳಕಿಗೆ ಬಂದಿದೆ.
ಪತ್ನಿ ಸ್ಪಷ್ಟನೆ:
ಇದೇ ವೇಳೆ, ತಿಪ್ಪರಾಜು ಅವರ ಪತ್ನಿ, ಜಿ.ಪಂ. ಸದಸ್ಯೆ ಸೌಮ್ಯ, ತಾನು ಈ ಪತ್ರವನ್ನೇ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಗಂಡ ಬಹಳ ಒಳ್ಳೆಯವರಾಗಿದ್ದು, ಯಾರೊಂದಿಗೂ ಅವರು ಕೆಟ್ಟದಾಗಿ ನಡೆದುಕೊಂಡಿಲ್ಲ. ತನಗೆ ಪಿಎಸ್'ಐ ಬೇಬಿ ವಾಲೇಕರ್ ಯಾರೆಂದೇ ಗೊತ್ತಿಲ್ಲ, ಎಂದು ಸೌಮ್ಯ ಹೇಳಿದ್ದಾರೆ.
ಮಹಿಳಾ ಆಯೋಗ ಏನ್ ಹೇಳುತ್ತೆ?
ಸೌಮ್ಯ ಅವರ ಹೆಸರಿನಲ್ಲಿ ಪತ್ರದ ಮೂಲಕ ತಮಗೆ ದೂರು ತಲುಪಿದ್ದು ನಿಜ ಎಂದು ಮಹಿಳಾ ಹಕ್ಕು ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ. ಒಂದು ವೇಳೆ, ಆ ಪತ್ರವನ್ನು ತಾನು ಬರೆದಿಲ್ಲ ಎಂದು ಸೌಮ್ಯ ಹೇಳಿದಲ್ಲಿ ತಾನು ಪ್ರಕರಣವನ್ನು ಇಲ್ಲಿಗೇ ಕೈಬಿಡುತ್ತೇನೆ ಎಂದೂ ನಾಗಲಕ್ಷ್ಮೀ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ, ಮಹಿಳಾ ಆಯೋಗಕ್ಕೆ ಬಂದ ಪತ್ರವನ್ನು ಸೌಮ್ಯ ತಿಪ್ಪರಾಜು ಅವರು ಬರೆದಿಲ್ಲವಾದಲ್ಲಿ, ಅದನ್ನು ಯಾರು ಬರೆದರೆಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಯಾವಾಗ ಉತ್ತರ ಸಿಗಬೇಕಷ್ಟೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.