
ಬೆಂಗಳೂರು(ಸೆ. 06): ನಿನ್ನೆ ರಾತ್ರಿ ಬಲಿಯಾದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್'ಐಟಿ ತಂಡಕ್ಕೆ ವಹಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇತ್ತೀಚೆಗೆ ಡಿವೈಎಸ್'ಪಿ ಗಣಪತಿ ಪ್ರಕರಣದ ತನಿಖೆಯ ವಿಚಾರದಲ್ಲಿ ಟೀಕೆಗೆ ಗುರಿಯಾಗಿರುವ ಸಿಐಡಿಗೆ ಗೌರಿ ಲಂಕೇಶ್ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಲು ಸಿಎಂ ನಕಾರ ತೋರಿದ್ದಾರೆ. ಐಜಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಡಿಜಿಪಿಯವರು ತನಿಖಾ ತಂಡವನ್ನು ರಚಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಸ್'ಐಟಿ ತನಿಖೆಯ ವರದಿ ಬಂದ ಬಳಿಕ ಸಿಬಿಐಗೆ ಹೆಚ್ಚಿನ ತನಿಖೆಗೆ ವಹಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಪ್ರಗತಿಪರರಿಗೆ ರಕ್ಷಣೆ: ಇದೇ ವೇಳೆ, ರಾಜ್ಯದಲ್ಲಿರುವ ಎಲ್ಲಾ ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರ ಪಟ್ಟಿ ಮಾಡಿ ಅವರೆಲ್ಲರಿಗೂ ರಕ್ಷಣೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ವ್ಯವಸ್ಥಿತ ಅಪರಾಧಕ್ಕೇನು ಮಾಡೋಣ?
ಕಲಬುರ್ಗಿ ಹತ್ಯೆಯ ನಿದರ್ಶನವಿರುವ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಅವರ ಪ್ರಾಣಕ್ಕೆ ಅಪಾಯವಿರುವ ವಿಚಾರದ ಸುಳಿವನ್ನು ಪತ್ತೆಹಚ್ಚಲು ಬೇಹುಗಾರಿಕೆ ಸಂಘಟನೆಗಳು ವಿಫಲವಾಗಿವೆ. ಈ ವಿಚಾರ ಸಾಕಷ್ಟು ಟೀಕೆಗೆ ಒಳಗಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯನವರು ಇದನ್ನು ಬೇಹುಗಾರಿಕೆ ವೈಫಲ್ಯವೆಂದು ಒಪ್ಪಲು ನಿರಾಕರಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯು ಆರ್ಗನೈಸ್ಡ್ ಕ್ರೈಮ್ ಆಗಿದೆ. ಈ ವ್ಯವಸ್ಥಿತ ಅಪರಾಧದ ಸುಳಿವನ್ನು ಬೇಹುಗಾರಿಕೆಗಳಿಂದ ಕಂಡುಹಿಡಿಯಲು ಸಾಧ್ಯವಿಲ್ಲ ಎಂಬುದು ಸಿಎಂ ಅವರ ಅಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.