ವಿಕೃತ ಮನಸ್ಸಿನವರು ಸಾವಲ್ಲೂ ಸಂಭ್ರಮಿಸುವುದನ್ನು ನೋಡಿದ್ದೇವೆ. ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ರೆಬಲ್ ಸ್ಟಾರ್ ಅಂಬರೀಶ್ ನಿಧನದ ವೇಳೆಯೂ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಮನಸಿಗೆ ಬಂದ ಹಾಗೆ ಬರೆದುಕೊಂಡಿದ್ದರು.
ಬೆಂಗಳೂರು[ಡಿ.07] ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆರೈಕೆಗಾಗಿ ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ಅವರ ಆರೋಗ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಭಕ್ತರು ಆತಂಕಗೊಳ್ಳುವುದು ಬೇಕಿಲ್ಲ ಎಂದು ಪದೆ ಪದೆ ಹೇಳಲಾಗುತ್ತಿದೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ವಿಕೃತ ಮನಸ್ಸಿನವರು ಶ್ರೀಗಳ ಸಾವಿನ ಬಗ್ಗೆಯೇ ಬರೆದಿದ್ದಾರೆ. ನಾಗರಿಕರಿಂದ ವಿರೋಧ ಬಂದ ನಂತರ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಯಾವ ಕಾರಣಕ್ಕೆ ಇಂಥ ಪೋಸ್ಟ್ ಹಾಕಿದ್ದೀರಾ? ನೀವು 420 ಎಂಬುದಾಗಿ ಕಮೆಂಟ್ ಮಾಡಲಾಗಿತ್ತು. ಪೋಸ್ಟ್ ಹಾಕಿದ್ದವರು ನಂತರ ಡಿಲೀಟ್ ಮಾಡಿದ್ದಾರೆ.
ನಡೆದಾಡುವ ದೇವರು, ಅಕ್ಷರ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲಾಗಿದೆ. ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿದ್ದು, ನುರಿತ ಸರ್ಜನ್ ಡಾ.ಮಹಮದ್ ರೇಲಾ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.