
ಮಂಗಳೂರು(ಎ.28): ಇತ್ತೀಚೆಗೆ ಚಿತ್ರ ನಟಿಯರ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲ ದಿನಗಳ ಹಿಂದಷ್ಟೇ ಖ್ಯಾತ ಮಲಯಾಳಂ ನಟಿಯ ಅಪಹರಣ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಇದೀಗ ಕನ್ನಡ ಸುದ್ದಿವಾಹಿನಿಯ ನಿರೂಪಕಿಯಾಗಿ ಕರ್ನಾಟಕದಾದ್ಯಂತ ತನ್ನ ಛಾಪು ಮೂಡಿಸಿದ್ದ, ನಟಿಯೂ ಆಗಿರುವ ಶೀತಲ್ ಶೆಟ್ಟಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತಾಗಿ ಖುದ್ದು ಶೀತಲ್ ಶೆಟ್ಟಿ ತಮ್ಮ ಫೆಸ್'ಬುಕ್ ಅಕೌಂಟ್'ನಲ್ಲಿ ಬರೆದುಕೊಂಡಿದ್ದಾರೆ. ಹಾಗಾದ್ರೆ ಶೀತಲ್ ಶೆಟ್ಟಿಗೆ ಕಿರುಕುಳ ನೀಡಿದ್ದು ಯಾರು? ಮುಂದೆ ಏನಾಯ್ತು? ಇಲ್ಲಿದೆ ವಿವರ
ಅಶ್ಲೀಲ ಸಂದೇಶ ಕಳುಹಿಸಿದ ಯುವಕ
ಕಳೆದ ಮೂರು ದಿನಗಳ ಹಿಂದಷ್ಟೇ ಶೀತಲ್ ತಮ್ಮ ಫೇಸ್'ಬುಕ್'ನಲ್ಲಿ ಹೊಸದೊಂದು ಫೋಟೋ ಅಪ್ಲೋಡ್ ಮಾಡಿದ್ದರು. ಇದಾದ ಬಳಿಕ ಅನಾಮಿಕನೊಬ್ಬ ಶೀತಲ್'ರವರಿಗೆ ಮೆಸೆಂಜರ್'ನಲ್ಲಿ ಫೋಟೋ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೇ ಅಶ್ಲೀಲ ಸಂದೇಶಗಳನ್ನೂ ಕಳುಹಿಸಿದ್ದಾನೆ. ಮೊದಲಿಗೆ ಸುಮ್ಮನಿದ್ದ ನಿರೂಪಕಿ ಈತನ ಹುಚ್ಚುತನ ಅತಿರೇಕಕ್ಕೇರಿದಾಗ ಧೈರ್ಯದಿಂದ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಪೊಲೀಸ್ ಕಂಪ್ಲೇಟ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇವರ ಪ್ರತಿಕ್ರಿಯೆ ಕಂಡು ಭಯಪಟ್ಟ ಯುವಕ ತನ್ನ ಮಾತನ್ನೇ ಬದಲಾಯಿಸಿದ್ದಲ್ಲದೇ ಕ್ಷಮೆಯನ್ನೂ ಕೇಳಿದ್ದಾನೆ. ಇದು ನಿಮ್ಮ ಪರ್ಸನಲ್ ಅಕೌಂಟ್ ಹೌದೋ ಅಲ್ಲವೋ ಎಂದು ಪರೀಕ್ಷಿಸಲು ಹೀಗೆ ಮಾಡಿದೆ ಎಂದಿದ್ದಾನೆ. ತನ್ನ ಮಾತಿನ ಮಧ್ಯೆ ಶೀತಲ್'ರನ್ನು ಸಹೋದರಿ ಎಂದೂ ಸಂಭೋದಿಸಿದ್ದಾನೆ.
ಶೀತಲ್ ತಮ್ಮ ಅಕೌಂಟ್'ನಲ್ಲಿ ಯುವಕನ ಸಂದೇಶಗಳುಳ್ಳ ಸ್ಕ್ರೀನ್ ಶಾಟ್'ಗಳನ್ನೇ ಹಾಕುವ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ.
ಮಾನವೀಯತೆಯ ದೃಷ್ಟಿಯಿಂದ ದೂರು ನೀಡಿಲ್ಲ
ಈ ಬಗ್ಗೆ ಪೊಲೀಸ್ ಕಂಪ್ಲೇಟ್ ನೀಡಲು ಯೋಚನೆ ಮಾಡಿದ್ದರೂ ಸದ್ಯ ದೂರು ನೀಡಿಲ್ಲ. ಮಾನವೀಯತೆಯ ದೃಷ್ಟಿಯಿಂದ ನಾನು ದೂರು ನೀಡುವುದಿಲ್ಲ ಎಂದು ಖುದ್ದು ಶೀತಲ್ ಫೇಸ್'ಬುಕ್ ಲೈವ್ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೇ ವೀಕ್ಷಕರ ಬಳಿ ಇಂತಹ ನಿಮಗೂ ಇಂತಹ ಸಂದೇಶಗಳು ಬಂದರೆ ಭಯಪಡದೆ, ಧೈರ್ಯದಿಂದ ಸೂಕ್ತ ಕ್ರಮ ಕೈಗೊಳ್ಳಿ ಎಂದು ವಿನಂತಿಸಿಕೊಂಡಿದ್ದಾರೆ.
ಇನ್ನು ಫೇಸ್'ಬುಕ್'ನಲ್ಲಿ ಹಾಕಲು ನಿಮಗೆ ಹೇಗೆ ಧೈರ್ಯ ಬಂತು ಎಂದು ವೀಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೀತಲ್, ನನಗೂ ಭಯವಾಗಿತ್ತು ಫೇಸ್'ಬುಕ್'ಗೆ ಆದರೆ ನನ್ನ ತಮ್ಮ ನನ್ನಲ್ಲಿ ಧೈರ್ಯ ತುಂಬಿದ, ನೀನೇ ಸುಮ್ಮನಾದರೆ ಉಳಿದವರು ಏನು ಮಾಡಬೇಕು ಎಂದ. ಅವನ ಮಾತಿನಿಂದ ನನಗೆ ಈ ಧೈರ್ಯ ಬಂತು ಎಂದಿದ್ದಾರೆ.
ಯಾರು ಆ ಯುವಕ?
ಸಂದೇಶ ಕಳುಹಿಸಿದಾತನ ಅಕೌಂಟ್'ನಲ್ಲಿ 'Roy Picardo' ಎಂಬ ಹೆಸರು ನಮೂದಾಗಿದೆ. ಈತ ಓರ್ವ ಅಂಗವಿಕಲ ಎಂದಿರುವ ಶೀತಲ್ ಹೆಚ್ಚಿನ ಮಾಹಿತಿಯನ್ನು ಬಿಚ್ಚಿಟ್ಟಿಲ್ಲ. ಆದರೆ ಈ ಘಟನೆಯಿಂದ ಕುಪಿತರಾಗಿರುವ ಅಭಿಮಾನಿಗಳು, ಯುವಕನ ವಿರುದ್ಧ ಸಿಡಿದೆದ್ದಿದ್ದಾರೆ. ಆತನ ಫೋಟೋ ಶೇರ್ ಮಾಡಿಕೊಂಡು 'ಈತ ಸಿಗುವವರೆ ಈ ಫೋಟೋ ಶೇರ್ ಮಾಡಿ, ಈತನಿಗೆ ಶಿಕ್ಷೆ ಸಿಗಲೇಬೇಕು' ಎಂದು ಮನವಿ ಮಾಡಿಕೊಂಡಿದ್ದಾರೆ. ಫೇಸ್'ಬುಕ್'ನಲ್ಲಿ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಯುವಕನ ಅಕೌಂಟ್ ಡಿಲೀಟ್ ಆಗಿದೆ.
ಗಮನಿಸಬೇಕಾದ ವಿಚಾರವೆಂದರೆ ಶೀತಲ್ ಶೆಟ್ಟಿಯವರದ್ದು ವೆರಿಫೈಡ್ ಅಕೌಂಟ್,ಹೀಗಿದ್ದರೂ ಯುವಕ ಇದು ಅಸಲಿ ಅಕೌಂಟೋ ಅಥವಾ ನಕಲಿಯೋ ಎಂದು ಪರೀಕ್ಷಿಸಲು ಹೀಗೆ ಮಾಡಿದೆ ಎಂದಿರುವುದು ನಿಜಕ್ಕೂ ಹಾಸ್ಯಾಸ್ಪದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.