ಉ.ಕ ಪ್ರತ್ಯೇಕತೆ ವಿಷಬೀಜ: ದೊಡ್ಡ ಗೌಡರಿಗೆ ಯಡಿಯೂರಪ್ಪ 3 ಪ್ರಶ್ನೆ!

By Web DeskFirst Published Aug 3, 2018, 1:55 PM IST
Highlights

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ವಿಚಾರ! ದೇವೆಗೌಡರ ಹೇಳಿಕೆಗೆ ಗರಂ ಆದ ಯಡಿಯೂರಪ್ಪ! ದೊಡ್ಡ ಗೌಡರಿಗೆ 3 ಪ್ರಶ್ನೆ ಕೇಳಿದ ಯಡಿಯೂರಪ್ಪ! ಪ್ರತ್ಯೇಕತೆ ವಿಷಬೀಜ ಬಿತ್ತಿದ್ದು ಯಾರೆಂದು ಗೊತ್ತಿಲ್ವಾ?

ಬೆಂಗಳೂರು(ಆ.3): ಅಧಿಕಾರ ಸಿಗದೇ ಹತಾಶರಾದ ಕಾರಣ ಯಡಿಯೂರಪ್ಪ ಪ್ರತ್ಯೇಕ ಉತ್ತರ ಕರ್ನಾಟಕ ಎಂಬ ವಿಷ ಬೀಜ ಬಿತ್ತುತ್ತಿದ್ದಾರೆ ಎಂಬ ಮಾಜಿ ಪ್ರಧಾನಿ ದೇವೆಗೌಡರ ಹೇಳಿಕೆಗೆ ಯಡಿಯೂರಪ್ಪ ಗರಂ ಆಗಿದ್ದಾರೆ.

ದೇವೆಗೌಡರ ಹೇಳಿಕೆಗೆ ಸೂಕ್ತ ತಿರುಗೇಟು ನೀಡಿರುವ ಯಡಿಯೂರಪ್ಪ, ಅಧಿಕಾರಕ್ಕಾಗಿ ರಾಜ್ಯ ಹೋಳು ಮಾಡುವಷ್ಟು ಕೀಳು ಮಟ್ಟದ ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ ಎಂದು ಗುಡುಗಿದ್ದಾರೆ. ಅಧಿಕಾರಕ್ಕಾಗಿ ಅವಕಾಶವಾದಿ ಮೈತ್ರಿ ಮಾಡಿಕೊಂಡಿದ್ದು ಯಾರು ಎಂಬುದು ರಾಜ್ಯದ ಜನೆತೆಗೆ ಗೊತ್ತಿದೆ ಎಂದು ದೇವೆಗೌಡರ ವಿರುದ್ಧ ಯಡಿಯೂರಪ್ಪ ಹರಿಹಾಯ್ದರು.

ಬೆಂಗಳೂರಿನ ಡಾಲರ್ಸ್ ಕಾಲನಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ದೇವೆಗೌಡರಿಗೆ ಮೂರು ಪ್ರಶ್ನೆಗಳನ್ನು ಕೇಳಿದರು. ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ, ಈ ಹಿಂದೆ ಸಿಎಂ ಆಗಿದ್ದ ಲಿಂಗಾಯತ ನಾಯಕರು ಉ.ಕ ಭಾಗಕ್ಕೆ ನೀಡಿದ ಕೊಡುಗೆ ಅಂತಾ ಕೇಳಿದ್ದರು. ಈ ಮೂಲಕ ಪ್ರತ್ಯೇಕತೆಯ ಬೀಜವನ್ನು ಸಿಎಂ ಅವರೇ ಬಿತ್ತಿದರು ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅದರಂತೆ ಚೆನ್ನಪಟ್ಟಣದಲ್ಲಿ ಮಾತನಾಡುತ್ತಾ, ಜಾತಿ ಮತ್ತು ಹಣದ ಆಮೀಷಕ್ಕೆ ಬಲಿಯಾಗಿ ಮತ ಹಾಕಿದ್ದೀರಿ ಎಂದು ಉ.ಕ. ಭಾಗದ ಜನರನ್ನು ಚುಚ್ಚಿದವರು ಸಿಎಂ ಕುಮಾರಸ್ವಾಮಿ ಅವರೇ. ಈ ಕುರಿತು ದೇವೆಗೌಡರಿಗೆ ಏನು ಗೊತ್ತಿಲ್ಲವೇ ಎಂದು ಯಡಿಯೂರಪ್ಪ ಸವಾಲು ಹಾಕಿದರು. ಅಲ್ಲದೇ ಉ.ಕ. ಭಾಗದಿಂದ ರಾಜ್ಯಕ್ಕೆ ಬರುವ ಆದಾಯ ಎಷ್ಟು ಎಂದು ಕೇಳಿದ ಕುಮಾರಸ್ವಾಮಿ ಅವರ ಕಿವಿ ಹಿಂಡುವ ಕೆಲಸ ನಿವೇಕೆ ಮಾಡಿಲ್ಲ ಎಂದು ಗೌಡರಿಗೆ ಸವಾಲು ಹಾಕಿದರು.

ಉ.ಕ ದಲ್ಲಿ ಅಶಾಂತಿ ನೆಲೆಸಲು ಸಿಎಂ ಕುಮಾರಸ್ವಾಮಿ ಅವರೇ ನೇರ ಕಾರಣರಾಗಿದ್ದು, ಅವರಿಗೆ ಬುದ್ದಿವಾದ ಹೇಳೊದು ಬಿಟ್ಟು ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಯಡಿಯೂರಪ್ಪ ಹರಿಹಾಯ್ದರು. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ತಮ್ಮ ಮಗನಿಂದ ರಾಜ್ಯ ಛಿದ್ರವಾಗದಂತೆ ನೋಡಿಕೊಳ್ಳುವುದು ದೇವೆಗೌಡರ ಜವಾಬ್ದಾರಿ ಎಂದು ಯಡಿಯೂರಪ್ಪ ಗುಡುಗಿದ್ದದಾರೆ.

click me!