
ದಾವಣಗೆರೆ : ಎಲ್ಲ ಒಳ ಪಂಗಡಗಳೂ ಸೇರಿದಂತೆ ರಾಜ್ಯ ದಲ್ಲಿ ಸುಮಾರು 1.5 ಕೋಟಿ ಜನಸಂಖ್ಯೆ ಹೊಂದಿರುವ ದೊಡ್ಡ ಸಮಾಜವಾದ ವೀರಶೈವ ಲಿಂಗಾಯತರ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದಿಂದಲೇ ಪ್ರತ್ಯೇಕ ಗಣತಿ, ಸಮೀಕ್ಷೆ ಕಾರ್ಯ ಕೈಗೊಳ್ಳುವುದಾಗಿ ಅಖಿತ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಜಾತಿ, ಆರ್ಥಿಕ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಕೈಗೊಂಡಿದ್ದರೂ ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಹಿಂದೂ ಲಿಂಗಾಯತ, ಹಿಂದೂ ವೀರಶೈವ ಎಂಬುದಾಗಿ ಸಮಾಜ ಬಾಂಧವರು ಬರೆಸಿರುವುದು ಸರಿಯಲ್ಲ. ಇದು ವೀರಶೈವ ಲಿಂಗಾಯತರ ತಪ್ಪು. ‘ಹಿಂದು' ಎಂದು ಸೇರಿಸದಂತೆ ಸಮಾಜ ಬಾಂಧವರಿಗೆ ಸಾಕಷ್ಟುಅರಿವು ಮೂಡಿಸಿದ್ದರೂ ಗೊಂದಲ ಮಾಡಿಕೊಂಡಿದ್ದಾರೆ. ವೀರಶೈವ ಲಿಂಗಾಯ ತರ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದಿಂದಲೇ ಪ್ರತ್ಯೇಕ ಗಣತಿ, ಸಮೀಕ್ಷೆ ಕಾರ್ಯವನ್ನೂ ಕೈಗೊಂಡು, ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಿದ್ದು, ಫಡ್ನವಿಸ್ಗೆ 14ಕ್ಕೆ ಅಭಿನಂದನೆ: ವಿಜಯಪುರ ಮಹಿಳಾ ವಿವಿಗೆ ಅಕ್ಕ ಮಹಾದೇವಿ ಹೆಸರಿಟ್ಟ, ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ವಿಶ್ವ ಗುರು ಬಸವಣ್ಣನ ಭಾವಚಿತ್ರ ಹಾಕಲು ಆದೇಶಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಜೂ.14ರಂದು ಬೆಂಗಳೂರಿನ ಅರಮನೆ ಮೈದಾನದ ಶ್ರೀ ಕೃಷ್ಣ ವಿಹಾರ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯ ಜೊತೆಗೆ ನೆರೆಯ ಮಹಾರಾಷ್ಟ್ರದಲ್ಲೂ ಬಸವ ಜಯಂತಿ ಆಚರಣೆ, ಬಸವ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಂಡ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನೂ ಸಮಾರಂಭದಲ್ಲಿ ಸನ್ಮಾನಿಸಲು ಆಹ್ವಾನಿಸಲಾಗುತ್ತಿದೆ. ಶ್ರೀ ಬಸವೇಶ್ವರರನ್ನು ಪೂಜ್ಯ ಭಾವನೆಯಿಂದ ಕಂಡ ಸಿದ್ದರಾಮಯ್ಯ, ಫಡ್ನವಿಸ್ ಅವರಿಗೆ ಅಂದು ಸಂಜೆ 4ಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಭಿನಂದಿಸಲಾಗುವುದು ಎಂದರು.
ಬಸವೇಶ್ವರರ ಭಾವಚಿತ್ರ ಸರ್ಕಾರಿ ಕಚೇರಿಯಲ್ಲಿ ಅಳವಡಿಸಲು ನಿರ್ದೇಶನ ನೀಡಿದ್ದು ಎಲ್ಲ ಸಮುದಾಯಕ್ಕೂ ಹೆಮ್ಮೆಯ ಸಂಗತಿ. ಹಿಂದಿನ ಸಿಎಂಗಳಾದ ಎಸ್.ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ್, ಎಸ್.ಆರ್. ಕಂಠಿ, ಜೆ.ಎಚ್. ಪಟೇಲ್, ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಸಿಎಂಗಳೂ ಮಾಡದ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಯಾವುದೇ ಸರ್ಕಾರವಿರಲಿ, ಯಾರೇ ಸಿಎಂ ಆಗಿರಲಿ ವೀರಶೈವ ಸಮಾಜಕ್ಕೆ ಕೆಟ್ಟದ್ದು ಮಾಡಿದರೆ, ಅನ್ಯಾಯವಾದರೆ ನೋಡಿಕೊಂಡು ಮಹಾಸಭಾ ಸುಮ್ಮನೆ ಕೂರಲ್ಲ. ಅದೇ ರೀತಿ ಒಳ್ಳೆಯ ಕೆಲಸ ಮಾಡಿದಾಗ ಅಭಿನಂದಿಸುವುದನ್ನೂ ಮರೆಯುವುದಿಲ್ಲ. ಕಲಬುರಗಿಯ ಕೇಂದ್ರೀಯ ವಿವಿಗೆ ಅಂಬೇಡ್ಕರ್ ಹೆಸರಿಡ ಲಿದ್ದು, ರಾಜ್ಯದ ವಿವಿಗೆ ಬಸವೇಶ್ವರರ ಹೆಸರು ನಾಮಕರಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಹೇಮರೆಡ್ಡಿ ಮಲ್ಲಮ್ಮ ಜಯಂತಿಗೂ ಸರ್ಕಾರ ಮುಂದಾಗಿದ್ದಕ್ಕೆ ಈ ಸನ್ಮಾನ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.