ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಓರ್ವ ಅತ್ಯಾಚಾರಿ ಎಂದು ಪೋಸ್ಟ್ ಹಾಕಿದ್ದ ರ್ಯಾಪ್ ಹಾಡುಗಾರ್ತಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ವಾರಾಣಸಿ [ಜೂ.21]: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಇಂಗ್ಲೆಂಡ್ ಮೂಲಕದ ರಾರಯಪರ್ ತರುಣ್ ಕೌರ್ ಧಿಲ್ಲೋನ್ ಅಲಿಯಾಸ್ ಹರ್ದ್ ಕೌರ್ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಲಾಗಿದೆ.
ಯೋಗಿ ಒಬ್ಬ ‘ಅತ್ಯಾಚಾರಿ’ ಹಾಗೂ ಮುಂಬೈ ಉಗ್ರ ದಾಳಿ ವೇಳೆ ಸಾವನ್ನಪ್ಪಿದ ಹಿರಿಯ ಐಪಿಎಸ್ ಅಧಿಕಾರಿ ‘ಹೇಮಂತ್ ಕರ್ಕರೆ’ ಸಾವಿಗೆ, ಆರ್ಎಸ್ಎಸ್ ಮತ್ತು ಅದರ ಮುಖ್ಯಸ್ಥ ಮೋಹನ್ ಭಾಗವತ್ ಕಾರಣ ಎಂದು ಕೌರ್ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದರು.
ಈ ಕುರಿತು ಸ್ಥಳೀಯ ನ್ಯಾಯವಾದಿ ಶಶಾಂಕ್ ಶೇಖರ್, ಬುಧವಾರ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ವಾರಾಣಸಿಯ ಕಂಟೋನ್ಮೆಂಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದೂರನ್ನು ಸೈಬರ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.