
ನವದೆಹಲಿ: ಕರ್ನಾಟಕದ ಹಿರಿಯ ನ್ಯಾಯಮೂರ್ತಿಯಾಗಿದ್ದ ಜಯಂತ್ ಪಟೇಲ್ ಅವರನ್ನು ವರ್ಗಾವಣೆಗೊಳಿಸುವ ಪ್ರಸ್ತಾವ ಹಾಗೂ ಅದರ ವಿರುದ್ಧ ಬೇಸರಗೊಂಡು ನ್ಯಾ| ಜಯಂತ್ ಅವರು ರಾಜೀನಾಮೆ ನೀಡಿದ ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ನ್ಯಾ| ಜಯಂತ್ ಅವರನ್ನು ಕರ್ನಾಟಕ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಿದ್ದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ.
ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬ ಕೋರಿಕೆಯನ್ನು ಗುರುವಾರ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಂಗ ಪಾರದರ್ಶಕತೆ ಹಾಗೂ ಸುಧಾರಣೆ ಕುರಿತ ರಾಷ್ಟ್ರೀಯ ವಕೀಲರ ಆಂದೋಲನ ಎಂಬ ಸಂಘಟನೆಯ ಕಾರ್ಯದರ್ಶಿ ಎ.ಸಿ. ಫಿಲಿಪ್ ಅವರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.
ಅದರ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂದು ವಕೀಲ ಮ್ಯಾಥ್ಯೂಸ್ ಜೆ.ನೆಡುಂಪಾರಾ ಅವರು ಗುರುವಾರ ವಾದಿಸಿದರು. ಆದರೆ ಈ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು.
ಸಂಬಂಧಿತ ಹೈಕೋರ್ಟ್ನಿಂದ ಮಾಹಿತಿ ಪಡೆದೇ ವಿವೇಚಾಯುತ ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಕೋರಿಕೆಯನ್ನು ಸುಪ್ರೀಂಕೋರ್ಟಿನಲ್ಲಿ ಅರ್ಹತೆ ಪಡೆದ ಹಿರಿಯ ವಕೀಲರಷ್ಟೇ ಇಡಬಹುದು. ಹೀಗಾಗಿ ನೀವು ಹೊರಡಿ ಎಂದು ನೆಡುಂಪಾರಾ ಅವರಿಗೆ ಕೋರ್ಟ್ ತಾಕೀತು ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.