ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ ಅವರ ಗಡೀಪಾರು ವಿಳಂಬವಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ ಅವರ ಗಡೀಪಾರು ವಿಳಂಬವಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
‘ಏನಿದು ನಿಮ್ಮ ವರ್ತನೆ? ಸುಪ್ರೀಂ ಕೋರ್ಟ್ ಆದೇಶಕ್ಕೂ ನೀವು ಕಿಮ್ಮತ್ತು ನೀಡುವುದಿಲ್ಲವೆ? ನಾವು ಈಗಾಗಲೇ ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೆ ಸಾಕಷ್ಟು ಎಚ್ಚರಿಕೆ ನೀಡಿದ್ದೇವೆ.
8 ತಿಂಗಳಿಂದ ಸೂಚನೆ ನೀಡುತ್ತಲೇ ಇದ್ದೇವೆ. ಆದರೂ ಈ ಬಗ್ಗೆ ಕ್ರಮ ಜರುಗಿಸುತ್ತಿಲ್ಲ’ ಎಂದು ನ್ಯಾ| ಅರುಣ್ ಮಿಶ್ರಾ ಅವರ ಪೀಠ ಕಿಡಿಕಾರಿತು. ‘ವಿದೇಶದಲ್ಲಿರುವ
ಈ ಇಬ್ಬರು ಆರೋಪಿಗಳನ್ನು ಭಾರತಕ್ಕೆ ಕರೆತರಲು ಆಗುತ್ತದೆಯೇ ಇಲ್ಲವೇ ಹೇಳಿಬಿಡಿ. ಏಕೆ ನೀವು ಆದೇಶ ಪಾಲಿಸುತ್ತಿಲ್ಲ?’ ಎಂದೂ ಒಂದು ಹಂತದಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಕೋರ್ಟ್ ಪ್ರಶ್ನಿಸಿತು.
ಜೊತೆಗೆ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ ಅವರು, ಗಡೀಪಾರು ಪ್ರಕ್ರಿಯೆಯ ಔಪಚಾರಿಕತೆಗಳನ್ನು ಅಷ್ಟರೊಳಗೆ ಮುಗಿಸಬೇಕೆಂದು ಸೂಚಿಸಿದರು.