ಯಡಿಯೂರಪ್ಪ ಮತ್ತು ದಿಲ್ಲಿ ನಾಯಕರೊಬ್ಬರು ಜಾರಕಿಹೊಳಿ ಸಹೋದರರ ಸಂಪರ್ಕದಲ್ಲಿದ್ದಾರೆ | ಸರ್ಕಾರ ಕೆಡವಿ ಹಾಕುವ ಉತ್ಸಾಹದಲ್ಲಿದ್ದಾರೆ ಸತೀಶ್ ಜಾರಕಿಹೊಳಿ | ಕುತೂಹಲ ಮೂಡಿಸಿದೆ ರಾಜ್ಯ ರಾಜಕಾರಣ
ಬೆಂಗಳೂರು (ಸೆ. 11): ಸತೀಶ್ ಜಾರಕಿಹೊಳಿಗೆ ಹೆಚ್ಚು ಮನಸ್ಸು ಬಿಜೆಪಿ ದಿಲ್ಲಿ ನಾಯಕರು ಹೇಳುತ್ತಿರುವ ಪ್ರಕಾರ ಯಡಿಯೂರಪ್ಪ ಮತ್ತು ದಿಲ್ಲಿಯ ನಾಯಕರೊಬ್ಬರು ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಇಬ್ಬರ ಜೊತೆಯೂ ಸಂಪರ್ಕದಲ್ಲಿದ್ದಾರೆ.
ಬಿಜೆಪಿ ಮೂಲಗಳು ಹೇಳುವ ಪ್ರಕಾರ ಈ ಬಾರಿ ಜಿದ್ದಾಜಿದ್ದಿಯಲ್ಲಿ ಸರ್ಕಾರ ಕೆಡವಿಹಾಕುವ ಉತ್ಸಾಹ ಸ್ವತಃ ಪ್ರಗತಿಪರ ಎಂದು ಹೇಳಿಕೊಳ್ಳುವ ಸತೀಶ್ ಜಾರಕಿಹೊಳಿ ಅವರಿಗೆ ಜಾಸ್ತಿ ಇದೆಯಂತೆ. ಆದರೆ ಜಾರಕಿಹೊಳಿ ಸಹೋದರರ ಬಳಿ ಈಗಿರುವ 13 ಕಾಂಗ್ರೆಸ್ ಶಾಸಕರು ಬಹುತೇಕ ಸಿದ್ದರಾಮಯ್ಯ ಅವರ ಬೆಂಬಲಿಗರು. ಅವರು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಆದ್ಯತೆ ನೀಡುತ್ತಿದ್ದಾರೆಯೇ ಹೊರತೂ ಈಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗಲು ಮೀನಮೇಷ ಎಣಿಸುತ್ತಿದ್ದಾರೆ.
ಹೀಗಾಗಿ ಯಾವಾಗ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಕೈಹಾಕುತ್ತದೋ ಆಗ ಬಂಡಾಯ ಎದ್ದರೆ ಮುಂದೆ ಹೆಜ್ಜೆ ಇಡಲು ಜಾರಕಿಹೊಳಿ ಸಹೋದರರು ಮತ್ತು ಯಡಿಯೂರಪ್ಪ ನಡುವೆ ಮೂರನೇ ವ್ಯಕ್ತಿ ಒಬ್ಬರ ಮೂಲಕ ಮಾತುಕತೆ ನಡೆಯುತ್ತಿದೆಯಂತೆ. ಆದರೆ ಬಿಜೆಪಿ ಹೈಕಮಾಂಡ್ಗೆ ಸರ್ಕಾರ ಬಿದ್ದೇ ಬೀಳುತ್ತದೆ ಎಂದು ಮನವರಿಕೆ ಆಗುವವರೆಗೆ ದಿಲ್ಲಿಯಿಂದ ಓಕೆ ಸಿಗುವುದು ಸುಲಭ ಅಲ್ಲ.
ಇತಿಹಾಸ ಫುಲ್ ಸರ್ಕಲ್
2011 ರಲ್ಲಿ ಕೂಡ ಸಹೋದರರಾದ ಬಾಲಚಂದ್ರ ಜಾರಕಿಹೊಳಿ, ಸತೀಶ್ ಮತ್ತು ರಮೇಶ್ ಜೊತೆ ಒಗ್ಗಟ್ಟಾಗಿ ೧೬ ಶಾಸಕರನ್ನು ಒಟ್ಟಿಗೆ ಇರಿಸಿ ಯಡಿಯೂರಪ್ಪ ಅವರ ಸರ್ಕಾರವನ್ನು ಬೀಳಿಸಲು ಹೋಗಿ ಒಂದು ವರ್ಷ ಕೋರ್ಟು ಕಚೇರಿ ಅಲೆದಾಡಿ ಸುಸ್ತಾಗಿ, ಮತ್ತೆ ಮರಳಿ ಬಿಜೆಪಿಗೆ ಬಂದಿದ್ದರು. ಆಗ ಬಾಲಚಂದ್ರ ಸಿಟ್ಟು ಮುಖ್ಯವಾಗಿ ಶೋಭಾ ಹಸ್ತಕ್ಷೇಪದ ವಿರುದ್ಧ ಶುರುವಾಗಿತ್ತು.
ಈಗ ನೋಡಿ ಮೂವರು ಸಹೋದರರು ಕಾಂಗ್ರೆಸ್ನ ಲಕ್ಷ್ಮಿ ಮೇಲೆ ಸಿಟ್ಟಾಗಿ ಸರ್ಕಾರ ಬೀಳಿಸಲು ಒಳಗಿಂದ ಒಳಗೆ ಗುಸುಗುಸು ಎನ್ನುತ್ತಿದ್ದು, ಹಾಗೇನಾದರೂ ಆದರೆ ಅದರ ಫಲಾನುಭವಿ ಯಡಿಯೂರಪ್ಪ ಆಗುತ್ತಾರೆ. ರಾಜಕಾರಣದ ಆಟವೇ ಹೀಗೆ!
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ