ಸಚಿನ್‌ರ 6 ವರ್ಷದ ಸಂಸದರ ವೇತನ, ಭತ್ಯೆಯ 90 ಲಕ್ಷ ಪ್ರಧಾನಿ ಪರಿಹಾರ ನಿಧಿಗೆ

By Suvarna Web DeskFirst Published Apr 2, 2018, 8:03 AM IST
Highlights

ರಾಜ್ಯಸಭೆಯ ಕಲಾಪಗಳಿಗೆ ಗೈರು ಹಾಜರಾಗುವ ಮೂಲಕ ಪದೇ ಪದೇ ಟೀಕೆಗೆ ಗುರಿಯಾಗುತ್ತಿದ್ದ ಖ್ಯಾತ ಕ್ರಿಕೆಟಿಗ, ರಾಜ್ಯಸಭಾ ಸಂಸದ ಸಚಿನ್‌ ತೆಂಡುಲ್ಕರ್‌, ತಮ್ಮ 6 ವರ್ಷದ ಸಂಸದರ ವೇತನ ಮತ್ತು ಭತ್ಯೆಯನ್ನು ಪ್ರಧಾನಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ನವದೆಹಲಿ: ರಾಜ್ಯಸಭೆಯ ಕಲಾಪಗಳಿಗೆ ಗೈರು ಹಾಜರಾಗುವ ಮೂಲಕ ಪದೇ ಪದೇ ಟೀಕೆಗೆ ಗುರಿಯಾಗುತ್ತಿದ್ದ ಖ್ಯಾತ ಕ್ರಿಕೆಟಿಗ, ರಾಜ್ಯಸಭಾ ಸಂಸದ ಸಚಿನ್‌ ತೆಂಡುಲ್ಕರ್‌, ತಮ್ಮ 6 ವರ್ಷದ ಸಂಸದರ ವೇತನ ಮತ್ತು ಭತ್ಯೆಯನ್ನು ಪ್ರಧಾನಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಗೆ ನಾಮಾಂಕನಗೊಂಡಿದ್ದ ಸಚಿನ್‌ ಅವಧಿ, ಮುಂದಿನ ಜುಲೈ ತಿಂಗಳಿಗೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಲ್ಲಿ ತಾವು ಸರ್ಕಾರದಿಂದ ಪಡೆದ 90 ಲಕ್ಷ ರು.ನಷ್ಟುವೇತನ ಮತ್ತು ಭತ್ಯೆಯನ್ನು ಪ್ರಧಾನಿ ಪರಿಹಾರ ನಿಧಿಗೆ ರವಾನಿಸಿದ್ದಾರೆ. ಈ ಕುರಿತು ಪ್ರಧಾನಿ ಸಚಿವಾಲಯವೂ ದೃಢಪಡಿಸಿದೆ.

‘ಅವರ ಈ ಚಿಂತನಶೀಲ ನಡೆಯನ್ನು ಪ್ರಧಾನಿಯವರು ಅಂಗೀಕರಿಸುತ್ತಾರೆ ಮತ್ತು ಕೃತಜ್ಞತೆ ಸಲ್ಲಿಸುತ್ತಾರೆ. ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಒದಗಿಸುವಲ್ಲಿ ಈ ಕೊಡುಗೆಗಳು ತುಂಬಾ ಸಹಾಯಕವಾಗಿವೆ’ ಎಂದು ಪ್ರಧಾನಿ ಸಚಿವಾಲಯದ ಸಂದೇಶದಲ್ಲಿ ತಿಳಿಸಲಾಗಿದೆ.

ಸಂಸದರ ನಿಧಿಯನ್ನೂ ತೆಂಡೂಲ್ಕರ್‌ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡಿದ್ದಾರೆ. ತಮಗೆ ಮಂಜೂರಾದ 30 ಕೋಟಿ ರು. ಅನುದಾನದಲ್ಲಿ ಶಿಕ್ಷಣ, ಶಾಲಾ ಕೊಠಡಿ ನಿರ್ಮಾಣ, ಕಟ್ಟಡ ನಿರ್ಮಾಣ ಸೇರಿದಂತೆ ಸುಮಾರು 185 ಯೋಜನೆಗಳಿಗೆ 7.4 ಕೋಟಿ ರು. ಅವರು ವಿನಿಯೋಗಿಸಿದ್ದಾರೆ. ಆಂಧ್ರ ಪ್ರದೇಶದ ಪುಟ್ಟಂರಾಜು ಕಂಡ್ರಿಗ ಮತ್ತು ಮಹಾರಾಷ್ಟ್ರದ ದೊಂಜ ಎಂಬ ಎರಡು ಗ್ರಾಮಗಳನ್ನು ಸಂಸದ ಗ್ರಾಮ ಆದರ್ಶ ಗ್ರಾಮ ಯೋಜನೆಯಡಿ ಅವರು ದತ್ತು ಪಡೆದಿದ್ದರು.

click me!