ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ BSY ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಉಡುಪಿ [ಆ.19]: ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಕೇವಲ ಸಿಬಿಐಗೆ ಯಾಕೆ, ಬೇಕಿದ್ರೆ ಟ್ರಂಪ್, ಪುಟಿನ್ ಅವರಿಗೂ ವಹಿಸಿ. ಈ ಕುಮಾರಸ್ವಾಮಿಗೆ ನಿಮ್ಮಿಂದ ಏನೂ ಮಾಡೋಕೆ ಸಾಧ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ನಾನು ಯಾವುದೇ ತನಿಖೆಗೂ ಮುಕ್ತವಾಗಿದ್ದೇನೆ. ನನಗೆ ಯಾವ ಆತಂಕವೂ ಇಲ್ಲ ಎಂದರು.
ನಾನೇನೂ ಚೆಕ್ ಮೂಲಕ ಹಣ ಪಡೆದಿಲ್ಲ. ರಾಜ್ಯವನ್ನು ಲೂಟಿ ಮಾಡಿಲ್ಲ. ನಾನು ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದವನು. 14 ತಿಂಗಳ ಆಡಳಿತದಲ್ಲಿ ನಾನು ಯಾವ ತಪ್ಪು ಮಾಡಿಲ್ಲ. ನಾನ್ಯಾಕೆ ಭಯ ಪಡಬೇಕು ಎಂದು ಪ್ರಶ್ನಿಸಿದರು.
ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿದ್ದರಾಮಯ್ಯ ಅವರ ಸಲಹೆಯಂತೆ ಸಿಬಿಐಗೆ ಕೊಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಆಪರೇಷನ್ ಕಮಲದ ಹೆಸರಲ್ಲಿ ಆದ ಸೂಟ್ ಕೇಸ್ ವ್ಯಾಪಾರದ ತನಿಖೆನೂ ಆಗಲಿ ಎಂದು ಹೇಳಿದ್ದಾರೆ. ಆದ್ದರಿಂದ ಅವರ ಈ ಸಲಹೆಯನ್ನೂ ಯಡಿಯೂರಪ್ಪ ನಡೆಸಲಿ ಎಂದರು.
ಫೋನ್ ಟ್ಯಾಪಿಂಗ್: ಮಾಜಿ ಸಿಎಂ ಕುಮಾರಸ್ವಾಮಿಗೆ ಉರುಳು..?
ಹಿಂದಿನ ಹದಿನೈದು ವರ್ಷಗಳಲ್ಲಿ ಆಡಳಿತ ನಡೆಸಿ ಯಡಿಯೂರಪ್ಪ ಸರ್ಕಾರ, ಸಿದ್ದರಾಮಯ್ಯ ಸರ್ಕಾರ ಮತ್ತು ನನ್ನ ಅವಧಿಯ ಎಲ್ಲಾ ವಿಚಾರಗಳನ್ನೂ ಸಿಬಿಐಯಿಂದಲೇ ತನಿಖೆ ಆಗಲಿ. ಬೇಕಿದ್ದರೇ ಟ್ರಂಪ್ ಪುಟೀನ್ ಗೆ ಹೇಳಿ ತನಿಖೆ ಮಾಡಿಸಿ ಎಂದರು.
ವರ್ಗಾವಣೆ ದಂಧೆ: ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಎಂದು ಬಿಪಿಯವರು ಹೇಳ್ತಿದ್ರು, ಈಗ ಬಿಜೆಪಿ ಸರ್ಕಾರ ಬಂದ ಮೇಲೆ ಯಲಹಂಕ ತಹಸೀಲ್ದಾರ್ ಪೋಸ್ಟ್ ಗೆ ಎಷ್ಟುವ್ಯವಹಾರ ಆಯ್ತು ಹೇಳಿ? ನಮಗೆ ವರ್ಗಾವಣೆ ಲೂಟಿ ಅಂತೀರಿ. ನೀವೇನು ಮಾಡ್ತಿದ್ದೀರಿ? ವರ್ಗಾವಣೆ ದಂದೆಗೆ ಯಡಿಯೂರಪ್ಪ ಸುಪುತ್ರನನ್ನೇ ಬಿಟ್ಡಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಪಟಲಾಂ ಏನು ಹೇಳುತ್ತೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ವಿಚಾರ ಈಚೆ ಬರುತ್ತದೆ. ಈಗ ರಾಜ್ಯ ಸಂಕಷ್ಟದಲ್ಲಿರುವಾಗ ಸರ್ಕಾರ ಟೀಕೆ ಸರಿಯಲ್ಲ ಅಂತ ಸುಮ್ಮನಿದ್ದೇನೆ ಎಂದರು.
ಮೈತ್ರಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ ಅಂದ್ರು. ಇದು ಪಾಪದ ಸರ್ಕಾರ ಅಂತ ಜನರಲ್ಲಿ ಭಾವನೆ ಮೂಡಿಸಿದ್ರು. ಒಂದು ವರ್ಗದ ಮಾಧ್ಯಮಗಳು ಸರ್ಕಾರ ಅಸ್ತಿರಗೊಳಿಸಲು ಪಣ ತೊಟ್ಟವು ಎಂದು ಆರೋಪಿಸಿದರು.