ನೀಲಕಂಠನಂತೆ ‘ವಿಷ’ ಸೇವನೆಗೆ ಸಿದ್ಧ: ಆರ್‌ಬಿಐ

By Suvarna Web DeskFirst Published Mar 15, 2018, 10:04 AM IST
Highlights

ವಜ್ರೋದ್ಯಮಿ ನೀರವ್‌ ಮೋದಿಯಿಂದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13900 ಕೋಟಿ ರು. ವಂಚನೆ ಬಳಿಕ ಬ್ಯಾಂಕಿಂಗ್‌ ಹಗರಣಗಳ ಬಗ್ಗೆ ಭಾರತೀಯ ರಿಜ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಗಾಂಧಿನಗರ: ವಜ್ರೋದ್ಯಮಿ ನೀರವ್‌ ಮೋದಿಯಿಂದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13900 ಕೋಟಿ ರು. ವಂಚನೆ ಬಳಿಕ ಬ್ಯಾಂಕಿಂಗ್‌ ಹಗರಣಗಳ ಬಗ್ಗೆ ಭಾರತೀಯ ರಿಜ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿನ ವಂಚನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌, ‘ನೀಲಕಂಠನ ರೀತಿಯಲ್ಲಿ ಕೇಂದ್ರ ಬ್ಯಾಂಕ್‌ ವಿಷ ಸೇವಿಸಿ ಮತ್ತು ಬೈಗುಳ ಸಹಿಸಿಕೊಳ್ಳಲಿದೆ.

ಆದರೆ, ಪ್ರತಿ ವಿಚಾರಣೆಯಿಂದಲೂ ಉತ್ತಮ ವ್ಯವಸ್ಥೆಯ ಹಠದೊಂದಿಗೆ ಪುಟಿದೇಳುವ ಯತ್ನ ಮಾಡುತ್ತೇವೆ,’ ಎಂದು ಹೇಳಿದ್ದಾರೆ. ಗುಜರಾತ್‌ನ ಕಾನೂನು ವಿವಿಯಲ್ಲಿ ಬುಧವಾರ ಉಪನ್ಯಾಸ ನೀಡಿದ ನೀಡುವ ವೇಳೆ, ‘ಕೆಲ ಉದ್ಯಮಿಗಳು ಮತ್ತು ಸಾಲಗಾರರು ಬ್ಯಾಂಕ್‌ಗಳಿಗೆ ವಂಚನೆ ಮಾಡುವ ಮೂಲಕ ದೇಶದ ಭವಿಷ್ಯವನ್ನೇ ಲೂಟಿ ಮಾಡುತ್ತಿದ್ದಾರೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಹಗರಣಗಳು ಮತ್ತು ಅವ್ಯವಹಾರಗಳಿಂದಾಗಿ ಆರ್‌ಬಿಐಗೂ ಕೋಪ, ನೋವು ಮತ್ತು ಯಾತನೆಯಾಗುತ್ತದೆ,’ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇಂಥ ಘಟನೆಗಳನ್ನು ತಡೆಯುವ ಸಲುವಾಗಿ ಬ್ಯಾಂಕ್‌ಗಳ ಗುಣಮಟ್ಟದ ಆಸ್ತಿ ವಿಮರ್ಶೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಹೊರತಾಗಿಯೂ ನಾವು ಅವಹೇಳನವನ್ನು ಎದುರಿಸಲೇಬೇಕಾಗಿದ್ದರೆ, ಅದು ನಮ್ಮ ಜವಾಬ್ದಾರಿಯಾಗಿದ್ದು, ನೀಲಕಂಠನಂತೆ ವಿಷ ಸೇವಿಸಲು ಸಿದ್ಧ ಎಂದು ಹೇಳಿದ್ದಾರೆ.

ಆರ್‌ಬಿಐ ಹೆಚ್ಚು ಅಧಿಕಾರ ನೀಡಲು ಕಾನೂನು ಸುಧಾರಣೆಗಳ ಬಗ್ಗೆ ಧ್ವನಿಯೆತ್ತಿದ ಅವರು, ಹಲವು ಖಾಸಗಿ ಬ್ಯಾಂಕ್‌ಗಳಿಗೆ ಅನ್ವಯಿಸುವ ಹಲವು ಜವಾಬ್ದಾರಿಗಳನ್ನು ಸಾರ್ವಜನಿಕ ಬ್ಯಾಂಕ್‌ಗಳಿಗೂ ಅನ್ವಯವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

click me!