
ಬೆಳಗಾವಿ : ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜಾರಕಿಹೊಳಿ ಸಹೋದರರು ಒಂದು ವೇಳೆ ಈ ಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ‘ಉಗ್ರ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಕಾಂಗ್ರೆಸ್ ಹೈಕಮಾಂಡ್ ಅನ್ನು ಗುರುವಾರ ಎಚ್ಚರಿಸಿದ್ದಾರೆ.
ಶುಕ್ರವಾರ ನಡೆಯಲಿರುವ ಪಿಎಲ್ಡಿ ಬ್ಯಾಂಕ್ ಚುನಾವಣಾ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಈ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಪಿಎಲ್ಡಿ ಬ್ಯಾಂಕಿನ ಚುನಾವಣೆ ವಿಚಾರದಲ್ಲಿ ಸೋದರ ಸತೀಶ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಆದರೆ, ಸರ್ಕಾರಕ್ಕೆ ಎಚ್ಚರಿಕೆ ಕೊಡುವಂತಹ ಮೂರ್ಖರು ನಾವಲ್ಲ. ಹೆಬ್ಬಾಳ್ಕರ್ ಅವರನ್ನು ಹದ್ದುಬಸ್ತಿನಲ್ಲಿಡಲು ಪಕ್ಷದ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಅವರು ಆಗ್ರಹಿಸಿದರು.
ಸಹಾಯ ಮಾಡಿದ್ದೇ ನಾನು: ಹೆಬ್ಬಾಳಕರ ಕಡೆಯಿಂದ ನಾವು 90 ಕೋಟಿ ತೆಗೆದುಕೊಂಡಿದ್ದೇವೆ ಎನ್ನುವ ಸುಳ್ಳುಸುದ್ದಿ ಹರದಾಡು ತ್ತಿದೆ. ಇದನ್ನು ಕೇಳಿ ನಮಗೆ ದಿಗಿಲು ಬಡಿದಂತಾಗಿದೆ. ಉಪಕಾರ ಮಾಡಿದ್ದನ್ನು ಯಾರ ಮುಂದೆಯೂ ಹೇಳಬಾರದು. ಆದರೆ ಅನಿವಾರ್ಯವಾಗಿ ಅದನ್ನೀಗ ಹೇಳಲೇಬೇಕಿದೆ. 2007 - 08 ರಲ್ಲಿ ಅವರಿಗೆ ಗಾಡ್ ಫಾದರ್ ಯಾರು ಇದ್ದರೋ ಗೊತ್ತಿಲ್ಲ. ಅವರ ತಂದೆಗೆ ಕ್ಯಾನ್ಸರ್ ಆದ ವೇಳೆ ಹಣ ನೀಡಿದ್ದು ನಾನೇ. ಹೆಬ್ಬಾಳಕರ ಅವರ ಸಹೋದರ ಚೆನ್ನರಾಜ ಹಟ್ಟಿಹೊಳಿಯನ್ನು ಹಣ ಇಲ್ಲದ್ದಕ್ಕೆ ಹೈದ್ರಾಬಾದ್ ವಿವಿಯಿಂದ ಹೊರಹಾಕಿದ್ದರು. ಆಗ ಆತನ ನೆರವಿಗೆ ಬಂದಿದ್ದು, ಅವರ ಪುತ್ರನ ಶಿಕ್ಷಣಕ್ಕೂ ಸಹಾಯ ಮಾಡಿದವನು ನಾನೇ. ಹೀಗಿದ್ದಾಗ ಆಕೆ ನಮ್ಮ ಕುಟುಂಬದವರಿಗೆ ಅಷ್ಟೊಂದು ಹಣ ಸಾಲವಾಗಿ ಕೊಡುತ್ತಾಳೆಯೇ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.