ದೇಶದಲ್ಲಿನ ನದಿಗಳ ಉಳಿವಿಗಾಗಿ ಅರಿವು ಮೂಡಿಸಲು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ 'ನದಿ ಉಳಿಸಿ ರ್ಯಾಲಿ (ರ್ಯಾಲಿ ಫಾರ್ ರಿವರ್ಸ್) ಅಭಿಯಾನದ ಅಂಗವಾಗಿ ಇಂದು ಸಂಜೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಬೆಂಗಳೂರು (ಸೆ.09): ದೇಶದಲ್ಲಿನ ನದಿಗಳ ಉಳಿವಿಗಾಗಿ ಅರಿವು ಮೂಡಿಸಲು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ 'ನದಿ ಉಳಿಸಿ ರ್ಯಾಲಿ (ರ್ಯಾಲಿ ಫಾರ್ ರಿವರ್ಸ್) ಅಭಿಯಾನದ ಅಂಗವಾಗಿ ಇಂದು ಸಂಜೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಸದ್ಗುರು ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ದೆಹಲಿಯವರಿಗೆ 16 ರಾಜ್ಯಗಳಲ್ಲಿ 7 ಸಾವಿರ ಕಿಮೀ ಸಂಚರಿಸಿ ನದಿಗಳ ಬಗ್ಗೆ ಅರಿವು ಮೂಡಿಸುವ ಬೃಹತ್ ಅಭಿಯಾನಕ್ಕೆ ರಾಜ್ಯದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಭಿಯಾನಕ್ಕೆ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಕೂಡಾ ಸಾಥ್ ನೀಡಿವೆ.
ಇಂದು ಸಂಜೆ ಅರಮನೆ ಮೈದಾನದಲ್ಲಿ ಸಂಜೆ 5 ಗಂಟೆಯಿಂದ 7 ಗಂಟೆವರೆಗೆ ಬೃಹತ್ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜತೆಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್, ಕೇಂದ್ರ ಸಚಿವ ಅನಂತ್ ಕುಮಾರ್, ನಟ ಪುನೀತ್ ರಾಜ್'ಕುಮಾರ್, ಜಲಸಂಪನ್ಮೂಲ ಸಚಿವ ಎಂ, ಬಿ ಪಾಟೀಲ್, ಸಂಸದ ಪಿ ಸಿ ಮೋಹನ್ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 1 ಲಕ್ಷ ಮಂದಿ ಭಾಗವಹಿಸುವ ವಿಶ್ವಾಸವಿದೆ ಎನ್ನಲಾಗಿದೆ.
ಬೃಹತ್ ಸಮಾವೇಶದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಲಿದ್ದಾರೆ. ಈ ವೇಳೆ ನದಿಗಳ ಪುನಶ್ಚೇತನ ಹಾಗೂ ಅಭಿವೃದ್ಧಿಯ ಅಗತ್ಯತೆ, ಮುಂದಿನ ಭವಿಷ್ಯಕ್ಕೆ ನದಿಗಳ ಉಳಿವು ಎಷ್ಟು ಅನಿವಾರ್ಯ ಎಂಬುದರ ಬಗ್ಗೆ ಸಂದೇಶ ನೀಡಲಿದ್ದಾರೆ.