ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ, ಎಂಪಿ ಟಿಕೆಟ್ ಕೈತಪ್ಪಿದ ನೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಕಾರ್ಯಕರ್ತರ ಪ್ರೀತಿ ಮತ್ತು ಬೆಂಬಲದಿಂದ ಸೈದ್ಧಾಂತಿಕ ಹೋರಾಟ ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು (ಮಾ.14): ತಮ್ಮ ಮಾತು ಹಾಗೂ ಕೆಲಸದ ಕಾರಣದಿಂದಾಗಿಯೇ ಸುದ್ದಿಯಲ್ಲಿರುವ ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಶುಕ್ರವಾರ ನೋವಿನ ಟ್ವೀಟ್ ಮಾಡಿದ್ದಾರೆ. ಎಂಪಿ ಟಿಕೆಟ್ ಕೈತಪ್ಪಿದ ಬೇಸರ ಒಂದು ವರ್ಷವಾದರೂ ಕಳೆದಿಲ್ಲ ಅನ್ನೋದು ಅವರ ಟ್ವೀಟ್ನಲ್ಲಿಯೇ ಅರ್ಥವಾಗುವಂತಿದೆ. ಆದರೆ, ಯಾವುದೇ ಹಿಂಜರಿಕೆ ಇಲ್ಲದೆ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರತಾಪ್ ಸಿಂಹಗೆ ಅವರ ಅಭಿಮಾನಿಗಳೊಂದಿಗೆ ವಿರೋಧಿಗಳು ಕೂಡ ಸಮಾಧಾನ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದರಾಗಿ ಉತ್ತಮವಾಗಿಯೇ ಕೆಲಸ ಮಾಡಿದ್ದ ಪ್ರತಾಪ್ ಸಿಂಹ ಅವರ ಬದಲಿಗೆ ಬಿಜೆಪಿ ಹೈಕಮಾಂಡ್ ರಾಜಮನೆತನದ ಯದುವೀರ್ ಒಡೆಯರ್ಗೆ ಟಿಕೆಟ್ ನೀಡಿತ್ತು. ಯದುವೀರ್ ಒಡೆಯರ್ ಕೂಡ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಟಿಕೆಟ್ ಮಿಸ್ ಆಗಿದ್ದರ ಬಗ್ಗೆ ಬರೆದುಕೊಂಡಿರುವ ಪ್ರತಾಪ್ ಸಿಂಹ, 'MP ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ ಮತ್ತು ನೀವು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು 8 FIR ಹಾಕಿಸಿಕೊಂಡರೂ ಮುಂದುವರಿಸುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ' ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ಬಿಜೆಪಿ ಕಾರ್ಯಕರ್ತರೊಬ್ಬರು, 'ನೀವು ಮಾಜಿ ಸಂಸದರಾಗಿ 8 FIR ಹಾಕಿಸಿಕೊಂಡಿದ್ದಿರಾ, ನಾನು ಕಳೆದ 25 ವರ್ಷದಿಂದ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು ಮಾಡ್ತಾ ಬಂದಿದ್ದೆನೆ ನನಗೆ ಜಮಖಂಡಿ ಯುವ ಮೋರ್ಚ ಜವಾಬ್ದಾರಿ ಬಿಟ್ರೆ ಮತ್ತೆ ಯಾವುದೇ ಜವಾಬ್ದಾರಿ ಸಿಕ್ಕಿಲ್ಲ.
ನಾನು ಒಟ್ಟು 17 FIR ಹಾಕಿಸಿಕೊಂಡರೂ ಪರಿವಾರದ ಕಾರ್ಯ ಮುಂದುವರಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, 'MP ಆಗಿದ್ದಾಗ FIRs ಮಾತ್ರವಲ್ಲ ಹುಣಸೂರು ಹನುಮಾನ್ ಜಯಂತಿ ಸಂಬಂಧ 2 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು' ಎಂದು ಬರೆದಿದ್ದಾರೆ.
'ಹೋರಾಟ ಮಾಡಿ ಅಂತ ನಿಮಗೆ ಬೊಮ್ಮಾಯಿ ಹೇಳಿದ್ನಾ? ಏನರೆ ಆದ್ರೆ ಕಠಿಣ ಕ್ರಮ ತಕೋತೀನಿ ಅಂತ ಹೇಳಿದ್ನಾ? ಗುರೂಜಿ ನೀವು ಮೊದಲು ನಿಮ್ ಫ್ಯಾಮಿಲಿ ಗೆ ಪ್ರಾಮುಖ್ಯತೆ ಕೊಡಿ. ಈ ಬಿಜೆಪಿನಾ ನಂಬಿಕೊಂಡು ಹೋರಾಡಿದ್ರೆ ಸ್ಮಶಾನದಲ್ಲಿ ಜಾಗಾನು ಇರಲ್ಲ' ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕೆಲಸ ಮಾಡೋರಿಗೆ mla,mp ಆಗಬೇಕು ಅಂತಾನೂ ಇಲ್ಲ,ಚಕ್ರವರ್ತಿ ಸೂಲಿಬೆಲೆ ಹುಡ್ಕೊಂಡು ಮಾಡತಾರೆ ಮಾಡಿ ಮುಂದೆ ಒಳ್ಳೆಯ ದಿನಗಳು ಬರ್ತವೆ ಆದ್ರೆ ಯೆತ್ನಾಳ್,ಜಾರಕಿಹೊಳಿ ಇಂತವರ ತರ ಕಚ್ದ ರಾಜಕೀಯ ಮಾಡಬೇಡಿ,ಪಕ್ಷದ ವೇದಿಕೆ ಇದೆ ಬಳಸಿಕೊಳ್ಳಿ ಅವ್ರಿಗೆ ಬೇನಾಮಿ ಹಣ ಇದೆ,ಹಣ ಬಲ ಕ್ಕಿಂತ ಜನ ಬಲ ಬೇಕು ಉತ್ತರದ ರಾಜಕೀಯ ಬೇರೆ,ದಕ್ಷಿಣ ದ ರಾಜಕೀಯ ಬೇರೆ' ಎಂದು ಪ್ರತಾಪ್ ಸಿಂಹಗೆ ಧೈರ್ಯ ತುಂಬಿದ್ದಾರೆ.
ಕೆಚ್ಚಲು ಕೊಯ್ಯುವ ಚಿತ್ರವೇ ಕಾಂಗ್ರೆಸ್ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ: ಪ್ರತಾಪ್ ಸಿಂಹ ಗೇಲಿ
'FIR ಅನ್ನುವುದು ಒಳ್ಳೆಯ ಬಿರುದಲ್ಲ, ಹಾಗೆಯೇ FIR ಬಿದ್ದ ಕೂಡಲೇ ವ್ಯಕ್ತಿ ಕೆಟ್ಟವ ಅಂತಲ್ಲ! ಅಂದಹಾಗೆ ಪಕ್ಷೇತರರಾಗಿ ನೋಡುವುದಾದರೆ ನಿಮಗೆ ಸ್ವಲ್ಪ ದ್ರಢತೆಯಲ್ಲಿ ಕೊರತೆಯಿದ್ದರೂ ಕೂಡ ಜನಪ್ರತಿನಿಧಿಯಾಗುವ ಅರ್ಹತೆ ಇದೆ. ಸೈದ್ಧಾಂತಿಕವಾಗಿ ನಿಮ್ಮ ವಿರೋಧಿಯಾದರೂ ವೈಯುಕ್ತಿಕವಾಗಿ ನಿಮಗೆ ಉತ್ತಮ ಭವಿಷ್ಯದೆ ಅನ್ನುವುದು ನನ್ನ ನಂಬಿಕೆ' ಎಂದು ಪ್ರತಾಪ್ ಸಿಂಹ ರಾಜಕೀಯಕ್ಕೆ ಬೆಂಬಲ ಸೂಚಿಸಿದ್ದಾರೆ.