
ಚೆನ್ನೈ(ಸೆ.19): ಲಕ್ಷಾಂತರ ಭಕ್ತರು ಭೇಟಿ ನೀಡುವ ದಕ್ಷಿಣ ಭಾರತದ ಪ್ರಖ್ಯಾತ ಪುಣ್ಯಕ್ಷೇತ್ರ ತಿರುಪತಿ ಭೂಕಂಪ ವಲಯದಲ್ಲಿದೆಯೇ? ಹೌದೆನ್ನುತ್ತದೆ ಐಐಟಿ-ರೂರ್ಕಿಯ ಅಧ್ಯಯನ ತಂಡ. ತಿರುಮಲ ಬೆಟ್ಟ ಹಾಗೂ ತಮಿಳುನಾಡಿನ ಪಾಲಾರ್ ಮತ್ತು ತರಂಗಂಬಾಡಿಗಳ ಕೆಳಗೆ ಟೆಕ್ಟಾನಿಕ್ ಪದರಗಳು ಒಂದಕ್ಕೊಂದು ಘರ್ಷಣೆಗೀಡಾಗುವ ಸಾಧ್ಯತೆ ಇದೆ. ಇದರಿಂದ ಇಲ್ಲಿ ಭೂಕಂಪ ಸಂಭವಿಸಬಹುದು ಎಂದು ಐಐಟಿ ತಂಡ ಆತಂಕ ವ್ಯಕ್ತಪಡಿಸಿದೆ.
ದಕ್ಷಿಣ ಭಾರತದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಬಹುದೆಂದು ಅದು ಹೇಳಿದೆ. ಇಲ್ಲಿ ಲಕ್ಷಾಂತರ ಮಂದಿ ಭಕ್ತರು ಪ್ರತಿನಿತ್ಯ ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಹೀಗಾಗಿ ತಿರುಮಲದಲ್ಲೇನಾದರೂ ಭೂಕಂಪ ಸಂಭವಿಸಿದರೆ ಆಗುವ ಹಾನಿ ಹೇಳತೀರದು.ಪಾಲಾರ್ ಅಥವಾ ತರಂಗಂಬಾಡಿಯ ಸನಿಹದಲ್ಲಿ ಕೇಂದ್ರಬಿಂದು ಇರುವ ಭೂಕಂಪ ಸಂಭವಿಸಿದರೆ ಸುತ್ತಲಿನ 200 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸುತ್ತದೆ.
ಚೆನ್ನೈ ಕೂಡ ಇದರಲ್ಲಿ ಸೇರಿದೆ. ಕೇಂದ್ರೀಯ ಜಲ ಆಯೋಗಕ್ಕಾಗಿ ಐಐಟಿ ರೂರ್ಕಿ ತಜ್ಞರ ತಂಡ ದಕ್ಷಿಣ ಭಾರತದಲ್ಲಿ, ಭೂಕಂಪ ವಲಯಗಳ ಸಮೀಕ್ಷೆ ನಡೆಸಿದೆ. ಅಣೆಕಟ್ಟು ನಿರ್ಮಾಣ ಹಾಗೂ ವಿದ್ಯುತ್ ಘಟಕಗಳ ಸ್ಥಾಪನೆಗೆಂದು ಜಲ ಆಯೋಗ ಇಂಥ ಅಧ್ಯಯನಗಳನ್ನು ನಡೆಸುತ್ತಿರುತ್ತದೆ. ಇದಕ್ಕೆಂದೇ 2018ರಲ್ಲಿ ದಕ್ಷಿಣ ಭಾರತದ ಭೂಕಂಪ ಸಾಧ್ಯಾಸಾಧ್ಯತೆಯ ವೆಬ್'ಸೈಟೊಂದನ್ನು ಬಿಡುಗಡೆ ಮಾಡಲಾಗುತ್ತದೆ. 1993ರಲ್ಲಿ 6.2 ತೀವ್ರತೆಯ ಭೂಕಂಪ ಮಹಾರಾಷ್ಟ್ರದ ಲಾತೂರ್'ನಲ್ಲಿ ಸಂಭವಿಸಿತ್ತು.
ಬಳಿಕ 1997ರಲ್ಲಿ ಮಧ್ಯಪ್ರದೇಶದ ಜಬಲ್ಪುರದಲ್ಲಿ 5.8 ತೀವ್ರತೆಯ ಕಂಪನ ಉಂಟಾಗಿತ್ತು. ಈಗ ದಕ್ಷಿಣ ಭಾರತದಲ್ಲಿ 6.5 ತೀವ್ರತೆಯ ಭೂಕಂಪ ಸಂ‘ವಿಸುವ ಸಾಧ್ಯತೆ ಇದೆ. ಇದು 1999ರ ಉತ್ತರಪ್ರದೇಶದ ಚಮೋಲಿ ಭೂಕಂಪ (6.8 ಕಂಪನಾಂಕ) ಹಾಗೂ ಉತ್ತರಕಾಶಿ (1991, 6.8) ಭೂಕಂಪಗಳಿಗೆ ಸಮನಾದೀತು ಎಂದು ಐಐಟಿ-ರೂರ್ಕಿಯ ಪ್ರೊ|ಎಂ. ಎಲ್.ಶರ್ಮಾ ಹೇಳಿದ್ದಾರೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.