. ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ರಾಜ್ಯಸಭೆಗೆ ಪರಿಗಣಿಸಿದರೆ ಪುತ್ರ ರುಮಾನ್ ಬೇಗ್ಗೆ ಶಿವಾಜಿ ನಗರ ಕ್ಷೇತ್ರದ ಟಿಕೆಟ್ ಕೊಡಿಸುವುದು ರೋಷನ್ ಬೇಗ್ ಅವರ ಬಯಕೆ
ಬೆಂಗಳೂರು(ಮಾ.11): ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಪಡೆಯಲು ಸೋಮವಾರ ಕಡೆಯ ದಿನವಾಗಿದೆ. ಹೀಗಾಗಿ ಕಾಂಗ್ರೆಸ್ ಕಚೇರಿಯಲ್ಲಿ ಈಗ ಅರ್ಜಿ ಪಡೆಯುವ ಹಾಗೂ ಅರ್ಜಿ ಸಲ್ಲಿಸುವವರ ದಂಡು ಹೆಚ್ಚಾಗತೊಡಗಿದೆ. ಶನಿವಾರ ಹತ್ತಾರು ಮಂದಿ ಅರ್ಜಿ ಪಡೆದರೆ, ಹಲವರು ಬಂದು ಅರ್ಜಿ ಸಲ್ಲಿಸಿದರು.
ಕುತೂಹಲಕಾರಿ ಸಂಗತಿಯೆಂದರೆ, ರಾಜ್ಯಸಭೆ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿರುವ ಸಚಿವ ರೋಷನ್ಬೇಗ್ ಅವರ ಪುತ್ರ ರುಮಾನ್ ಬೇಗ್ ಅವರು ಶಿವಾಜಿ ನಗರ ಕ್ಷೇತ್ರದ ಟಿಕೆ'ಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ರಾಜ್ಯಸಭೆಗೆ ಪರಿಗಣಿಸಿದರೆ ಪುತ್ರ ರುಮಾನ್ ಬೇಗ್ಗೆ ಶಿವಾಜಿ ನಗರ ಕ್ಷೇತ್ರದ ಟಿಕೆಟ್ ಕೊಡಿಸುವುದು ರೋಷನ್
ಬೇಗ್ ಅವರ ಬಯಕೆ. ಅದಕ್ಕೆ ಪೂರಕವಾಗಿ ಶನಿವಾರ ರುಮಾನ್ ಬೇಗ್ ಕೆಪಿಸಿಸಿ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಿದರು. ಇವರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಿ.ಎಸ್. ಉಗ್ರಪ್ಪ ಅವರು ಮೊಳಕಾಲ್ಮೂರು ಕ್ಷೇತ್ರಕ್ಕಾಗಿ, ಶಾಸಕ ಕೆ.ಎನ್. ರಾಜಣ್ಣ ಪುತ್ರ ರಾಜೇಂದ್ರ ತುಮಕೂರು ಗ್ರಾಮೀಣ ಕ್ಷೇತ್ರಕ್ಕಾಗಿ ಶನಿವಾರ ಅರ್ಜಿ ಸಲ್ಲಿಸಿದರು.
ಉಳಿದಂತೆ ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್ (ಗದಗ), ರಮಾನಾಥ್ ರೈ (ಬಂಟ್ವಾಳ) ಹಾಗೂ ಎಂ.ಕೃಷ್ಣಪ್ಪ (ಬೆಂಗಳೂರಿನ ವಿಜಯನಗರ) ಅವರು ಸೇರಿದಂತೆ ಹಲವರು ಕೆಪಿಸಿಸಿ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಿದರು.