
ಬೆಳಗಾವಿ(ಫೆ.02): ಪೇದೆಯೊಬ್ಬ ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಹೊತ್ತಿನಲ್ಲಿ ಹುಡುಗಿಯೊಬ್ಬಳು ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಆದರೆ ಯುವತಿಯ ರಕ್ಷಿಸಲು ಹೋದ ಪೊಲೀಸಪ್ಪನನ್ನೇ ಕಿಡಿಗೇಡಿಗಳು ಬಾವಿಗೆ ತಳ್ಳಿ ಪರಾರಿಯಾಗಿದ್ದಾರೆ. ಇಡೀ ರಾತ್ರಿ ಬಾವಿಯಲ್ಲೇ ಕಳೆದ ಕಾನ್ಸ್ಟೇಬಲ್'ನ್ನು ಬೆಳಿಗ್ಗೆ ರಕ್ಷಿಸಲಾಗಿದೆ.
ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಜು ಕೆರೆಮನಿ, ಮೊನ್ನೆ ರಾತ್ರಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹೊತ್ತಿನಲ್ಲಿ ಬೆಂಗಳೂರು-ಪುನಾ ರಾಷ್ಟ್ರೀಯ ಹೆದ್ದಾರಿಯ ಬಳಿ ಹುಡುಗಿಯೊಬ್ಬಳು ರಕ್ಷಿಸುವಂತೆ ಕಿರುಚಿಕೊಂಡಿದ್ದಾಳೆ. ಆಗ ಆ ಹುಡುಗಿಯ ರಕ್ಷಣೆಗೆ ಹೋದ ರಾಜು ಫೋಟೋ ತೆಗೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳ ತಂಡ ಪೇದೆಯ ಬೆನ್ನಟ್ಟಿ ಗದ್ದೆಯಲ್ಲಿದ್ದ ಬಾವಿಗೆ ಇವರನ್ನು ತಳ್ಳಿ ಪರಾರಿಯಾಗಿದ್ದಾರೆ.
ಸತತ 13 ಗಂಟೆಗಳ ಕಾಲ ರಾಜು ತನ್ನನ್ನು ರಕ್ಷಿಸುವಂತೆ ಜೋರಾಗಿ ಕಿರುಚಾಡಿದ್ದಾರೆ. ಬಾವಿಯಲ್ಲಿ ಕೇವಲ ನಾಲ್ಕು ಅಡಿಯಷ್ಟು ನೀರು ಇದ್ದಿದ್ದರಿಂದ ಇವರ ಪ್ರಾಣ ಉಳಿದಿದೆ. ಆದರೆ, ಮೇಲಿಂದ ಬಿದ್ದ ರಭಸಕ್ಕೆ ಅವರ ಕಾಲು ಮುರಿದಿದೆ. ಇಡೀ ರಾತ್ರಿ ಬಾವಿಯೊಳಗೆ ಕಾಲ ಕಳೆದಿದ್ದಾರೆ. ಬೆಳಗ್ಗೆ ರೈತನೊಬ್ಬ ಇವರನ್ನು ನೋಡಿ ಸ್ಟೇಷನ್'ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸತತ 1 ಗಂಟೆ ಕಾರ್ಯಾಚರಣೆ ನಡೆಸಿ ರವಿಯನ್ನು ಮೇಲೆತ್ತಲಾಗಿದೆ.
ಒಟ್ಟಿನಲ್ಲಿ ಯುವತಿಯ ಕಷ್ಟಕ್ಕೆ ನೆರವಾಗಲು ಜೀವ ಪಣಕ್ಕಿಟ್ಟ ಪೊಲೀಸ್ ಪೇದೆ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಗಾಯಾಳು ಕಾನ್ಸ್ಟೇಬಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದು ಆರೋಪಿಗಳಿಗಾಗಿ ಪೊಲೀಸರು ಪಾತಾಳ ಗರಡಿ ಹಿಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.