
ನವದೆಹಲಿ (ಫೆ.01): ಬಹು ನಿರೀಕ್ಷಿತ ಬಜೆಟ್ ಮಂಡನೆ ಮಾಡಿದ ಬಳಿಕ ಮೊದಲ ಬಾರಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿತ್ತ ಸಚಿವ ಅರುಣ್ ಜೇಟ್ಲಿಗೆ ಅಭಿನಂದನೆ ಸಲ್ಲಿಸುತ್ತಾ, ತಮ್ಮ ಭಾಷಣ ಶುರು ಮಾಡಿದರು.
ಈ ಬಾರಿ ಬಜೆಟ್ ಎಲ್ಲಾ ವರ್ಗದವರಿಗೂ ಸಮಾನ ಆದ್ಯತೆ ನೀಡಿದೆ. 125 ಕೋಟಿ ಜನರ ಆಸೆ, ಆಕಾಂಕ್ಷೆ, ನಿರೀಕ್ಷೆಗಳನ್ನು ಪೂರೈಸಿದೆ. ದೇಶದ ಅಭಿವೃದ್ಧಿಗೆ ಒತ್ತು ನೀಡಿದೆ. ಜನಪರ, ರೈತಸ್ನೇಹಿ, ಉದ್ದಿಮೆದಾರರ ಪರ, ಅಭಿವೃದ್ಧಿ ಸ್ನೇಹಿ ಬಜೆಟ್ ಇದಾಗಿದೆ. ಮದ್ಯಮ ವರ್ಗದವರಿಗೆ ಅನುಕೂಲಕರವಾಗಿದ್ದು ಅವರ ಸೇವಿಂಗ್ಸ್ ಹೆಚ್ಚಿಸುವತ್ತ ನಾವು ಗಮನ ನೀಡಿದ್ದೇವೆ. ನಮ್ಮ ದೇಶದ ಬೆನ್ನೆಲುಬಾದ ರೈತರ ಸ್ಥಿತಿಗತಿಗಳನ್ನು ಇನ್ನಷ್ಟು ಉತ್ತಮಪಡಿಸಲು, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಲು ಅನೇಕ ಕ್ರಮಗಳನ್ನು ಪ್ರಸ್ತಾಪಿಸಿದ್ದೇವೆ. ಗ್ರಾಮೀಣ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 14 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದೇವೆ. ವಿದ್ಯುತ್, ಅಡುಗೆ ಅನಿಲದ ಮೇಲೆ ಸಬ್ಸಿಡಿ ನೀಡಿದ್ದೇವೆ. ಇದರ ನೇರ ಫಲಾನುಭವವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಲಿದೆ. ದೇಶದ ಬೇರೆ ಬೇರೆ ಜಿಲ್ಲೆಗಳಿಂದ ಬರುವಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು, ಸ್ವಚ್ಚತೆಗಾಗಿ, ಮಾರುಕಟ್ಟೆಯನ್ನು ನೀಡುವತ್ತ ಒತ್ತು ನೀಡಿದ್ದೇವೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಕೃಷಿ ಉತ್ಪನ್ನಗಳಿಗೆ ಶೇ. 100 ರಷ್ಟು ತೆರಿಗೆ ವಿನಾಯಿತಿ ನೀಡಿದ್ದೇವೆ.
ದೇಶದ ಪ್ರತಿಯೊಬ್ಬರೂ ಮೆಡಿಕಲ್ ಚಿಕಿತ್ಸೆ ಪಡೆಯುವುದು ಈಗ ಸುಲಭವಾಗಿದೆ. ನಮ್ಮ ದೇಶದ ಮೂರು ಸಂಸದೀಯ ಕ್ಷೇತ್ರಗಳ ನಡುವೆ ಒಂದು ಮೆಡಿಕಲ್ ಕಾಲೇಜಿನ ಅಗತ್ಯವಿದೆ. ಹಾಗಾಗಿ 5 ಲಕ್ಷ ರೂಪಾಯಿಯವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದ್ದು 10 ಕೋಟಿ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. 24 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಮಾಡಲಿದ್ದೇವೆ.
ಈ ಬಜೆಟ್'ನಲ್ಲಿ ಹಿರಿಯ ನಾಗರೀಕರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪೋಸ್ಟ್ ಆಫೀಸ್'ನಲ್ಲಿ ಮಹಿಳೆಯರು ಇಟ್ಟಿರುವ 50 ಸಾವಿರದವರೆಗಿನ ಠೇವಣಿಗೆ ಯಾವುದೇ ತೆರಿಗೆ ಇರುವುದಿಲ್ಲ.
ಒಟ್ಟಿನಲ್ಲಿ ಇದು ಜನಸ್ನೇಹಿ, ರೈತಪರ, ಮದ್ಯಮ ವರ್ಗಕ್ಕೆ ಅನುಕೂಲಕಾರಿ, ಉದ್ದಿಮೆ ದಾರರ ಪ್ರಿಯವಾಗಿರುವ ಬಜೆಟ್ ನೀಡಿರುವ ಜೇಟ್ಲಿ ತಂಡದವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳುತ್ತಾ ಮೋದಿ ಭಾಷಣ ಮುಗಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.