ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಪ್ರಧಾನಿ ಮೋದಿ : ಮೋದಿ ಹವಾ ಎಬ್ಬಿಸಲು ಅಮಿತ್‌ ಶಾ ಪ್ಲಾನ್‌

Published : Apr 07, 2018, 09:18 AM ISTUpdated : Apr 14, 2018, 01:12 PM IST
ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಪ್ರಧಾನಿ ಮೋದಿ :  ಮೋದಿ ಹವಾ ಎಬ್ಬಿಸಲು ಅಮಿತ್‌ ಶಾ ಪ್ಲಾನ್‌

ಸಾರಾಂಶ

ಈಗಾಗಲೇ ಕರ್ನಾಟಕಕ್ಕೆ ಹಲವಾರು ಭೇಟಿ ನೀಡಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇದೀಗ ತಮ್ಮ ಬತ್ತಳಿಕೆಯ ಅತಿ ದೊಡ್ಡ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ.

ರಾಕೇಶ್‌.ಎನ್‌.ಎಸ್‌.

ನವದೆಹಲಿ : ಈಗಾಗಲೇ ಕರ್ನಾಟಕಕ್ಕೆ ಹಲವಾರು ಭೇಟಿ ನೀಡಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇದೀಗ ತಮ್ಮ ಬತ್ತಳಿಕೆಯ ಅತಿ ದೊಡ್ಡ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. ಏಪ್ರಿಲ್ ಮಧ್ಯಭಾಗದಿಂದ ಬಹಿರಂಗ ಪ್ರಚಾರ ಅಂತ್ಯದ ದಿನದವರೆಗೆ ಕರ್ನಾಟಕದಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 10ರಿಂದ 15 ಬೃಹತ್‌ ಸಮಾವೇಶಗಳನ್ನು ಆಯೋಜಿಸಲು ರಾಜಕೀಯ ಚಾಣಾಕ್ಷ ಖ್ಯಾತಿಯ ಅಮಿತ್‌ ಶಾ ಹಾಗೂ ಅವರ ತಂಡ ನಿರ್ಧರಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು ವಿಭಾಗ, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಪ್ರದೇಶದಲ್ಲಿ ತಲಾ ಎರಡು ಸಮಾವೇಶಗಳು, ಮಧ್ಯ ಕರ್ನಾಟಕ ಮತ್ತು ಕರಾವಳಿಯಲ್ಲಿ ತಲಾ ಒಂದು ಮೋದಿ ಸಮಾವೇಶ ಆಯೋಜನೆಗೊಳ್ಳುವುದು ಖಚಿತವಾಗಿದ್ದು, ಅಗತ್ಯ ಬಿದ್ದರೆ ಕರಾವಳಿಯಲ್ಲಿ ಇನ್ನೊಂದು ಸಮಾವೇಶ ಆಯೋಜಿಸುವ ಆಯ್ಕೆಯನ್ನು ಬಿಜೆಪಿ ಮುಕ್ತವಾಗಿಟ್ಟುಕೊಂಡಿದೆ. ಇದಲ್ಲದೆ, ಇನ್ನೂ ನಾಲ್ಕೈದು ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲು ಚಿಂತಿಸಲಾಗಿದ್ದು, ಸ್ಥಳದ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಅಮಿತ್‌ ಶಾ ಟೀಮ್‌ ತೀರ್ಮಾನ: ಮೋದಿ ಸಮಾವೇಶ ಎಲ್ಲಿ ಆಯೋಜನೆಗೊಳ್ಳಬೇಕು ಎಂಬುದರ ನಿರ್ಧಾರವನ್ನು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಅಮಿತ್‌ ಶಾ ಅವರ ತಂಡವೇ ತೀರ್ಮಾನಿಸಲಿದೆ. ಸ್ಥಳೀಯ ನಾಯಕರ ಬೇಡಿಕೆಯಂತೆ ಸಮಾವೇಶ ಆಯೋಜಿಸುವ ಬದಲು, ಎಲ್ಲಿ ಆಯೋಜಿಸಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಕಂಡುಬರುತ್ತದೋ ಅಂತಹ ಸ್ಥಳಗಳಲ್ಲಿ ‘ಮೋದಿ ಶೋ’ ನಡೆಸಲು ಕೇಂದ್ರ ಬಿಜೆಪಿ ಲೆಕ್ಕಾಚಾರ ಹಾಕಿದೆ ಎಂಬ ಮಾಹಿತಿಯಿದೆ.

ಯಾವ ಪಕ್ಷಕ್ಕೆ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲಿರುವ ಮತದಾರರ ಪ್ರಮಾಣ ಹೆಚ್ಚಿರುವ, ಚಂಚಲ ಮತದಾರರು ದೊಡ್ಡ ಪ್ರಮಾಣದಲ್ಲಿರುವ ಪ್ರದೇಶಗಳಿಗೆ ನರೇಂದ್ರ ಮೋದಿ ಅವರು ಭೇಟಿ ನೀಡಿದರೆ ಬಿಜೆಪಿ ಅಭ್ಯರ್ಥಿಯತ್ತ ಈ ಮತಗಳನ್ನು ಸೆಳೆಯಬಹುದು ಎಂದು ಶಾ ಟೀಮ…ಗೆ ಅನಿಸಿದರೆ, ಆ ಭಾಗದಲ್ಲಿ ಮೋದಿ ರಾರ‍ಯಲಿಗಳನ್ನು ನಡೆಸುವ ಯೋಚನೆ ಇಟ್ಟುಕೊಳ್ಳಲಾಗಿದೆ ಎನ್ನಲಾಗಿದೆ.

ಅಂತಿಮ ಪಟ್ಟಿಬಳಿಕ ನಿರ್ಧಾರ:

ಮೋದಿ ಅವರ ಮುಂದಿನ ಕರ್ನಾಟಕ ಭೇಟಿ ಇನ್ನೂ ನಿಗದಿಯಾಗಿಲ್ಲ. ಟಿಕೆಟ್‌ ಹಂಚಿಕೆ ಮತ್ತು ಬಿಜೆಪಿಯ ಗೆಲ್ಲುವ, ತುಸು ಕಷ್ಟಪಟ್ಟರೆ ಗೆಲ್ಲಬಹುದಾದ ಕ್ಷೇತ್ರಗಳ ಅಂತಿಮ ಪಟ್ಟಿಸಿದ್ಧಗೊಂಡ ಬಳಿಕವೇ ಮೋದಿ ಪ್ರವಾಸ ನಿರ್ಧಾರವಾಗಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳುತ್ತವೆ.

ಗುಜರಾತ್‌ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಕಠಿಣ ಪರಿಸ್ಥಿತಿಯಲ್ಲಿದ್ದಾಗ ನರೇಂದ್ರ ಮೋದಿ ಪೇಟೆ ಪಟ್ಟಣಗಳಲ್ಲಿಯೂ ಸಮಾವೇಶ ನಡೆಸಿ ಬಿಜೆಪಿಯು ಅಲ್ಲಿ ಬಹುಮತದ ರೇಖೆಯನ್ನು ದಾಟುವ ಹಾಗೆ ನೋಡಿಕೊಂಡಿದ್ದರು. ಈಶಾನ್ಯ ಭಾರತದ ಚುನಾವಣೆಯಲ್ಲಿಯೂ ಕೂಡ ಮೋದಿ ಅವ್ಯಾಹತವಾಗಿ ಪ್ರಚಾರ ನಡೆಸಿ ಆ ರಾಜ್ಯಗಳಲ್ಲಿಯೂ ಕಮಲ ಅರಳುವಂತೆ ಮಾಡಿದ್ದರು.

ಕರ್ನಾಟಕದಲ್ಲಿಯೂ ಮೋದಿಯವರ ಮೋಡಿ ಇದೇ ರೀತಿ ನಡೆಯಬಹುದು ಎಂಬು ಬಿಜೆಪಿ ಭಾವಿಸಿದೆ. ತನ್ನ ಭದ್ರಕೋಟೆ ಅಥವಾ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿರುವ ಪ್ರದೇಶಗಳನ್ನು ಬಿಟ್ಟು ಮೋದಿ ರಾರ‍ಯಲಿಯಿಂದ ಹೆಚ್ಚಿನ ಸೀಟ್‌ ಗಳಿಕೆ ಆಗುವ ನಿರೀಕ್ಷೆಗಳಿರುವ ಜಾಗಗಳಿಗೆ ಮೋದಿ ಅವರನ್ನು ಕರೆತರುವ ತಂತ್ರ ಶಾ ಟೀಮ್ ಹೆಣೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ