
ಬೆಂಗಳೂರು: ಪ್ಲಾಸ್ಟಿಕ್'ನಿಂದ ತಯಾರಿಸಲ್ಪಟ್ಟಿವೆ ಎನ್ನಲಾದ ಅಕ್ಕಿ, ಸಕ್ಕರೆ, ಕಲ್ಲುಸಕ್ಕರೆ, ಮೊಟ್ಟೆಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದು, ಗುರುವಾರ ಒಂದೇ ದಿನ ರಾಜ್ಯದ ನಾಲ್ಕು ಕಡೆ ಪ್ಲಾಸ್ಟಿಕ್ ಅಕ್ಕಿ ವಿತರಣೆಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಅದರಲ್ಲಿಯೂ ಸರ್ಕಾರದ ಯೋಜನೆಯಾದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಿರುವ ಆರೋಪ ಇದೇ ಪ್ರಥಮ ಬಾರಿಗೆ ಕೇಳಿ ಬಂದಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪದ ಶ್ರೀರಾಮನಗರ, ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮಿನಿವಿಧಾನಸೌಧ ಬಡಾವಣೆಗಳ ನ್ಯಾಯ ಬೆಲೆ ಅಂಗಡಿಗಳಲ್ಲಿ, ರಾಮನಗರ ಜಿಲ್ಲೆ ವಿಜಯಪುರ, ಕನಕಪುರ ಸಮೀಪ ಕುರುಪೇಟೆಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಸದ್ದು ಮಾಡಿದೆ. ಆದರೆ ಇದು ಪ್ಲಾಸ್ಟಿಕ್ ಅಕ್ಕಿ ಹೌದೋ ಅಲ್ಲವೋ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ.
ಕಪ್ಪು ಬಣ್ಣಕ್ಕೆ ತಿರುಗಿತು ಅಕ್ಕಿ: ಗಂಗಾವತಿಯ ಶ್ರೀರಾಮನಗರದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡಿದ್ದು ಪ್ಲಾಸ್ಟಿಕ್ ಅಕ್ಕಿ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಖರೀದಿಸಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ವಾಸನೆ ಬರುವುದನ್ನು ನೋಡಿ ಅನುಮಾನ ಗೊಂಡಿದ್ದಾರೆ. ತಕ್ಷಣ ಅನ್ನ ಮಾಡಲು ಇಟ್ಟಾಗ ಈ ಅಕ್ಕಿ ಕಪ್ಪು ಬಣ್ಣಕ್ಕೆ ತಿರುಗಿದ್ದಲ್ಲದೆ, ಉಂಡೆ ಮಾಡಿ ನೆಲಕ್ಕೆ ಕುಕ್ಕಿದಾಗ ಚೆಂಡಿನಂತೆ ಚಿಮ್ಮಿದೆ. ಈ ಅಕ್ಕಿಯನ್ನು ರಸ್ತೆಗೆ ತಂದು ಪ್ರದರ್ಶಿಸಿರುವ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾರ್ವಜನಿಕರೊಬ್ಬರು ಆಹಾರ ಇಲಾಖೆಯ ನಿರೀಕ್ಷಕರಿಗೆ ಮಾಹಿತಿ ನೀಡಿದ್ದು ಅವರು ಸಂಜೆಯ ವೇಳೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚೆಂಡಿನಂತೆ ಪುಟಿದ ಅನ್ನದುಂಡೆ: ಅರಸೀಕೆರೆಯ ಮಿನಿ ವಿಧಾನಸೌಧ ಬಡಾವಣೆ ಸಮೀಪದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿರುವ ಅನ್ನಭಾಗ್ಯವೂ ಪ್ಲಾಸ್ಟಿಕ್ ಅಕ್ಕಿಯೇ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ ತಿಂಗಳು ಈ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಒಯ್ದು ಆಹಾರ ಸೇವಿಸಿದ ಸುತ್ತಮುತ್ತಲಿನ ಜನತೆ ಹೊಟ್ಟೆನೋವು ಮತ್ತು ಭೇದಿಗೆ ತುತ್ತಾಗಿದ್ದರು. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ಲಾಸ್ಟಿಕ್ ಮೊಟ್ಟೆಮತ್ತು ಅಕ್ಕಿಯ ಬಗ್ಗೆ ವರದಿ ವೀಕ್ಷಿಸಿದ ಕೆಲವರು ಗುರುವಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡೆದ ಅಕ್ಕಿಯನ್ನು ಬೇಯಿಸುವಾಗ ಪ್ಲಾಸ್ಟಿಕ್ ವಾಸನೆ ಬಂದಿರುವುದು ನೆನಪಿಗೆ ಬಂದಿದೆ. ಅಷ್ಟೇ ಅಲ್ಲದೆ ಅದನ್ನು ಉಂಡೆ ಮಾಡಿ ನೆಲಕ್ಕೆ ಎಸೆದಾಗ ಚೆಂಡಿನಂತೆ ಪುಟಿದಿದೆ. ಈ ಸಂಬಂಧ ಬಿಜಿ ಹಟ್ಟಿಯ ಸಾರ್ವಜನಿಕರು ಈ ಬಗ್ಗೆ ಸ್ಥಳೀಯ ಜೆಸಿ ಆಸ್ಪತ್ರೆಯ ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ತಹಸೀಲ್ದಾರ್ ಅಕ್ಕಿ ಮಾದರಿಯನ್ನು ಪರಿಶೀಲಿಸಿ ಪರೀಕ್ಷೆಗಾಗಿ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ರಾಮನಗರ, ಕನಕಪುರದಲ್ಲೂ ಪತ್ತೆ: ರಾಮನಗರ ತಾಲೂಕಿನ ವಿಜಯಪುರದ ಪಾರ್ವತಮ್ಮ ಎಂಬವರು ಬುಧವಾರ ಖರೀದಿಸಿದ 25 ಕೆಜಿ ಅಕ್ಕಿ ಮೂಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ದೊರೆಕಿದ್ದು ಅದರಿಂದ ಮಾಡಿದ ಅನ್ನವನ್ನು ಉಂಡೆ ಕಟ್ಟಿನೆಲಕ್ಕೆ ಬಡಿದರೆ ಚೆಂಡಿನಂತೆ ಪುಟಿದೇಳುತ್ತಿದೆ. ಆಹಾರ ಗುಣಮಟ್ಟಅಧಿಕಾರಿ ಪರಿಶೀಲಿಸಿದ್ದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಕನಕಪುರದಲ್ಲೂ ಹೀಗಾಗಿದೆ ಎನ್ನಲಾಗುತ್ತಿದೆ.
ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುವ ಅಕ್ಕಿ ಹಾಗೂ ಮತ್ತಿತರ ಆಹಾರ ಧಾನ್ಯಗಳಲ್ಲಿ ಪ್ಲಾಸ್ಟಿಕ್ ಮಿಶ್ರಿತ ಧಾನ್ಯಗಳು ಸಿಕ್ಕರೆ ಸೂಕ್ತ ತನಿಖೆ ನಡೆಸುವುದಾಗಿ ಸಚಿವ ಖಾದರ್ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.