
ನವದೆಹಲಿ: ಹಿಂದೂ ಜನಸಂಖ್ಯೆ ಕಡಿಮೆಯಿರುವ 8 ರಾಜ್ಯಗಳಲ್ಲಿ ಹಿಂದೂ ಧರ್ಮೀಯರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಹಿಂದೂಗಳಿಗೆ ಇಂಥ ಸ್ಥಾನಮಾನ ಸಿಕ್ಕಿದರೆ, ಅವರೂ ಕೂಡಾ ಇತರೆ ಧರ್ಮೀಯರು ಪಡೆಯುತ್ತಿರುವ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯ ಪಡೆಯಲು ಅನುವು ಮಾಡಿಕೊಡಲಿದೆ ಎಂದು ವಾದಿಸಲಾಗಿದೆ. 2011ರ ಜನಗಣತಿಯ ಪ್ರಕಾರ ದೇಶದ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಆದರೆ ಇದುವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹಿಂದೂಗಳನ್ನು ಈ ರಾಜ್ಯಗಳಲ್ಲಿ ಅಲ್ಪಸಂಖ್ಯಾತರೆಂದು ಘೋಷಿಸಿಲ್ಲ. ಪರಿಣಾಮ ಈ ರಾಜ್ಯಗಳಲ್ಲಿನ ಬಹುಸಂಖ್ಯಾತರು ಅಕ್ರಮ ಮತ್ತು ಏಕಪಕ್ಷೀಯವಾಗಿ ಹಿಂದೂಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೂಗಳಿಗೆ ಸಂವಿಧಾನದ 25ರಿಂದ 30ನೇ ವಿಧಿಯೊಳಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ದೆಹಲಿಯ ಬಿಜೆಪಿ ನಾಯಕ ಮತ್ತು ವಕೀಲ ಅಶ್ವನಿ ಉಪಾಧ್ಯಾಯ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಬಹುಸಂಖ್ಯಾತರಿಗೂ ಸೌಲಭ್ಯ: ಮುಸ್ಲಿಮರ ಸಂಖ್ಯೆ ಲಕ್ಷದ್ವೀಪದಲ್ಲಿ ಶೇ.96.20, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.68.30, ಅಸ್ಸಾಂನಲ್ಲಿ ಶೇ.34.20, ಪಶ್ಚಿಮ ಬಂಗಾಳದಲ್ಲಿ ಶೇ.27.5, ಕೇರಳದಲ್ಲಿ ಶೇ. 26.60, ಉತ್ತರ ಪ್ರದೇಶದಲ್ಲಿ ಶೇ.19.30, ಬಿಹಾರದಲ್ಲಿ ಶೇ.18ರಷ್ಟಿದೆ. ಆದರೂ ಅಲ್ಲಿ ಅವರಿಗೆ ಅಲ್ಪಸಂಖ್ಯಾತ ಮಾನ್ಯತೆಯಿಂದಾಗಿ ಸಕಲ ಸವಲತ್ತುಗಳು ಸಿಗುತ್ತಿವೆ.
ಮಿಜೋರಂ, ಮೇಘಾಲಯ, ನಾಗಾಲ್ಯಾಂಡ್ಗಳಲ್ಲಿ ಕ್ರೈಸ್ತರು ಬಹುಸಂಖ್ಯಾತರಾಗಿದ್ದಾರೆ. ಜೊತೆಗೆ ಗೋವಾ, ಕೇರಳ, ಮಣಿಪುರ, ತಮಿಳುನಾಡು, ಪಶ್ಚಿಮ ಬಂಗಾಳಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಕ್ರೈಸ್ತರು ಇದ್ದಾರೆ. ಅವರೆಲ್ಲರೂ ಅಲ್ಪಸಂಖ್ಯಾತರ ಸಲವತ್ತುಗಳನ್ನು ಪಡೆಯುತ್ತಿದ್ದಾರೆ. ಪಂಜಾಬ್ನಲ್ಲಿ ಬಹುಸಂಖ್ಯಾತರಾಗಿರುವ ಸಿಖ್ಖರು ದೆಹಲಿ, ಚಂಡೀಗಢ, ಹರ್ಯಾಣಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದು ಅಲ್ಪಸಂಖ್ಯಾತರಿಗಿರುವ ಸೌಕರ್ಯಗಳನ್ನು ನೀಡಲಾಗಿದೆ. ಆದರೆ ಹಿಂದೂಗಳನ್ನು ಮಾತ್ರ ಅವಕಾಶವಂಚಿತರನ್ನಾಗಿಸಲಾಗಿದೆ ಎಂದು ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.