
ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರ ನಡೆಸುತ್ತಿರುವ ಅಪಪ್ರಚಾರಕ್ಕೆ ಪ್ರತಿಯಾಗಿ, ಸಂಘಟನೆ ಬಗ್ಗೆ ವಾಸ್ತವ ವಿಷಯವನ್ನು ಜನರಿಗೆ ತಿಳಿಸಲು ದೇಶಾದ್ಯಂತ ‘ನಮಗೂ ಹೇಳಲಿಕ್ಕಿದೆ’ ಎಂಬ ಅಭಿಯಾನವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಮ್ಮಿಕೊಂಡಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಶಾಕಿಬ್, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಹಿಂದುತ್ವವಾದಿಗಳು ಪಿಎಫ್ಐ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ವಿವಿಧ ಆರೋಪಗಳನ್ನು ಹೊರಿಸುವ ಮೂಲಕ ಪಿಎಫ್ಐ ನಿಷೇಧಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ವೈಯಕ್ತಿಕ ದ್ವೇಷದಿಂದ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ನಡೆದ ಸಂದರ್ಭ, 7 ವರ್ಷಗಳ ಹಿಂದೆ ಕೇರಳದಲ್ಲಿ ಪ್ರವಾದಿ ವಿರುದ್ಧ ನಿಂದನಾತ್ಮಕ ಭಾಷೆ ಬಳಿಸಿದ್ದ ಪ್ರೊ.ಜೋಸೆಫ್ ಮೇಲೆ ನಡೆದ ದಾಳಿ, ಅನಂತರ ನಾರಾತ್’ನಲ್ಲಿ ಜನಾರೋಗ್ಯ ಜಾಗೃತಿ ಶಿಬಿರ ಆಯೋಜಿಸಿದ್ದ ವೇಳೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ ಎಂದು ಬಿಂಬಿಸಲಾಯಿತು. ಐಎಸ್ಐಎಸ್ಗೆ ಪಿಎಫ್ಐ ಭಾರತದ ಯುವ ಜನರನ್ನು ಕಳುಹಿಸಿಕೊಡುತ್ತಿದೆ. ಇತ್ತೀಚಿಗೆ ಕೇರಳದಲ್ಲಿ ಮತಾಂತರಗೊಂಡ ಆದಿಯಾ ಹಿಂದೆ ಪಿಎಫ್’ಐ ಕೈವಾಡವಿದೆ ಎನ್ನಲಾಗುತ್ತಿದೆ. ಇದೆಲ್ಲ ಅಪ್ಪಟ ಸುಳ್ಳು ಎಂದು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿಯೂ ಅಭಿಯಾನ ಹಮ್ಮಿಕೊಂಡಿದ್ದು, ಅ.15ರಂದು ನಗರದಲ್ಲಿ ರಾಜ್ಯಮಟ್ಟದ ಸಮಾವೇಶ ಜರುಗಲಿದೆ ಎಂದು ತಿಳಿಸಿದರು.
ಈ ವೇಳೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್, ಮುಖಂಡರಾದ ಶಾಫಿ ಬೆಳ್ಳಾರೆ, ಇಲ್ಯಾಸ್ ಅಹ್ಮದ್ ಇನ್ನಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.