
ದುಬೈ(ಜು.28): 2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸುವ ಕುರಿತು ಗಂಭೀರ ಚಿಂತನೆ ನಡೆಸಿದ್ದೆ. ಆದರೆ ಭಾರತವೂ ಪ್ರತೀಕಾರಕ್ಕಿಳಿಯಬಹುದು ಎಂದು ಹೆದರಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದೆ ಎಂಬ ಮಾಹಿತಿಯನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ 16 ವರ್ಷದ ಬಳಿಕ ಬಹಿರಂಗಪಡಿಸಿದ್ದಾರೆ.
ಭಾರತದ ವಿರುದ್ಧ ಅಣ್ವಸ್ತ್ರ ಬಳಸಬೇಕಾ ಬೇಡವಾ ಎಂಬ ಬಗ್ಗೆ ನನ್ನಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಾ ಹಲವಾರು ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದೇನೆ ಎಂದು ಜಪಾನ್ನ ದೈನಿಕ ‘ಮೈನಿಶಿ ಶಿಂಬುನ್’ಗೆ ಅವರು ತಿಳಿಸಿದ್ದಾರೆ.
2001ರಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ಭಾರತದ ಬಳಿಯಾಗಲೀ ಅಥವಾ ಪಾಕಿಸ್ತಾನದ ಹತ್ತಿರವಾಗಲೀ ಕ್ಷಿಪಣಿಗೆ ಬಳಸುವ ಅಣ್ವಸ್ತ್ರ ಸಿಡಿತಲೆಗಳು ಇರಲಿಲ್ಲ. ಅವನ್ನು ತಯಾರಿಸಲು ಒಂದೆರಡು ದಿನಗಳಾದರೂ ಬೇಕಾಗುತ್ತಿದ್ದವು ಎಂದು ಹೇಳಿದ್ದಾರೆ.
ಸಂಸತ್ ಭವನದ ಮೇಲಿನ ದಾಳಿ ಬಳಿಕ ಭಾರತ- ಪಾಕಿಸ್ತಾನ ನಡುವೆ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿ, ಇನ್ನೇನು ಯುದ್ಧವೇ ಸಂಭವಿಸಿಬಿಡುತ್ತದೆ ಎನ್ನುವಂತಹ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಅದು ತಣ್ಣಗಾಗಿತ್ತು. ಆಗ ವಾಜಪೇಯಿ ಅವರು ಭಾರತದ ಪ್ರಧಾನಿಯಾಗಿದ್ದರು.
ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಪ್ರಕರಣದಲ್ಲಿ ಆರೋಪಿಯಾಗಿರುವ ಮುಷರ್ರಫ್ (73) ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ತೆರಳಲು ಅವಕಾಶ ಸಿಕ್ಕಿತ್ತು. ಕಳೆದೊಂದು ವರ್ಷದಿಂದ ಅವರು ಅಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.