ಚರ್ಚೆಗೆ ಆಸ್ಪದವಾಯ್ತು ವಿದ್ಯಾಪೀಠದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ | ಪೇಜಾವರ ಶ್ರೀಗಳಿಂದ ಸ್ಪಷ್ಟನೆ | ರಾಜಕೀಯ ಭಾಷಣ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದ ಪೇಜಾವರ ಶ್ರೀ
ಉಡುಪಿ (ಏ. 09): ಮೊದಲಿಂದಲೂ ನಾವು ರಾಜಕೀಯ ಪಕ್ಷಕ್ಕೆ ಅತೀತರು. ಆದ್ದರಿಂದ ಬೆಂಗಳೂರಿನ ನಮ್ಮ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಭಾಷಣಕ್ಕೆ ಅವಕಾಶ ಕೊಟ್ಟಿಲ್ಲ, ನಮ್ಮ ಧೋರಣೆಗೆ ವಿರುದ್ಧವಾಗಿ ಚುನಾವಣಾ ಭಾಷಣ ನಡೆದಿಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ವಿದ್ಯಾಪೀಠದಲ್ಲಿ ಸೂಲಿಬೆಲೆ ಭಾಷಣ; ಟೀಂ ಮೋದಿಯಿಂದ ಸ್ಪಷ್ಟನೆ
ಯುಗಾದಿ ಹಬ್ಬದ ದಿನ ಪೇಜಾವರ ಮಠದ ಅಧೀನ ಬೆಂಗಳೂರಿನ ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ರಾಜಕೀಯ ಭಾಷಣ ನಡೆಯುತ್ತಿದೆ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಈ ಬಗ್ಗೆ ಪೇಜಾವರ ಶ್ರೀಗಳು ಸ್ಪಷ್ಟೀಕರಣ ನೀಡಿದ್ದಾರೆ. ಧಾರ್ಮಿಕ ಉಪನ್ಯಾಸದ ಹೊರತು ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಪ್ರಸ್ತಾವಿಸುವುದಿಲ್ಲ ಎಂದು ಭರವಸೆ ಕೊಟ್ಟಿದ್ದೆವು.
ಅದರಂತೆ ಚಕ್ರವರ್ತಿ ಸೂಲಿಬೆಲೆ ಅವರು ಯಾವುದೇ ರಾಜಕೀಯ ವಿಚಾರವನ್ನು ಎತ್ತದೆ ರಾಷ್ಟ್ರದ ಮಹತ್ವ, ಹಿಂದಿನ ಪರಂಪರೆ, ರಾಷ್ಟ್ರಾಭಿಮಾನದ ಬಗ್ಗೆ ಯಾವ ರಾಜಕೀಯದ ಸೋಂಕಿಲ್ಲದೆ ಉಪನ್ಯಾಸವನ್ನು ಮಾಡಿದ್ದಾರೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.