
ಚಂಡೀಗಡ(ಅ. 27): ಬಾಬ್ಬರ್ ಖಾಲ್ಸಾ ಎಂಬ ಪಂಜಾಬ್ ಪ್ರತ್ಯೇಕತಾವಾದಿ ಸಂಘಟನೆಗೆ ಸೇರಿದ 12 ಉಗ್ರಗಾಮಿಗಳು ಪಾಕಿಸ್ತಾನದ ಮೂಲಕ ಪಂಜಾಬ್ ರಾಜ್ಯದೊಳಗೆ ನುಸುಳಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ 12 ಭಯೋತ್ಪಾದಕರು ಉತ್ತರ ಭಾರತದ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಪಂಜಾಬ್ ಪೊಲೀಸರು ಈಗಾಗಲೇ ಎಲ್ಲಾ ಪ್ರಮುಖ ಸೇನಾ ನೆಲೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
ಪಂಜಾಬ್'ನಲ್ಲಿ ಅ.23ರಂದು ಬಂಧಿತನಾಗಿದ್ದ ಕಾಶ್ಮೀರದ ನಿವಾಸಿ ಕಮಲ್'ದೀಪ್ ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಈ ಮೇಲಿನ ಸುಳಿವು ಸಿಕ್ಕಿತೆನ್ನಲಾಗಿದೆ. ಪಾಕಿಸ್ತಾನದಲ್ಲಿ ಅತ್ಯುನ್ನತ ಮಟ್ಟದ ತರಬೇತಿ ಪಡೆದ ಬಾಬ್ಬರ್ ಖಾಲ್ಸಾ ಸಂಘಟನೆಗೆ ಸೇರಿದ 12 ಮಂದಿ ಈಗಾಗಲೇ ಭಾರತವನ್ನು ಪ್ರವೇಶಿಸಿದ್ದಾರೆಂದು ಕಮಲ್'ದೀಪ್ ಮಾಹಿತಿ ನೀಡಿದ್ದಾನೆ.
ಪಂಜಾಬ್'ನಲ್ಲಿ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಯೋಜಿಸಿರುವ ಸಾಧ್ಯತೆ ಇದೆ ಎಂದು ಪಂಜಾಬ್ ಪೊಲೀಸ್ ಇಲಾಖೆ ಶಂಕಿಸಿದೆ.
ಭಾರತದಲ್ಲಿ ನಿಷೇಧಿತವಾಗಿರುವ ಬಾಬ್ಬರ್ ಖಾಲ್ಸಾ ಸಂಘಟನೆಯು ಪಂಜಾಬಿಗಳಿಗೆ ಪ್ರತ್ಯೇಕ ರಾಷ್ಟ್ರ ಬೇಕೆಂದು ಹೋರಾಟ ನಡೆಸಲು ಜನ್ಮ ತಳೆದಿದೆ. ಇತ್ತೀಚಿನ ದಿನಗಳಲ್ಲಿ ಈ ಸಂಘಟನೆ ಪುನಶ್ಚೇತನಗೊಂಡಿದ್ದು, ಪಾಕಿಸ್ತಾನದ ಐಎಸ್'ಐ ಬೆಂಬಲ ಹೊಂದಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.