
ಬೆಂಗಳೂರು (ಅ.12): ಸುಪ್ರೀಂ ಕೋರ್ಟ್ ಆದೇಶದಂತೆ ದಿನವೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನೇ ದಿನೇ ಕುಸಿಯುತ್ತಿದೆ. ಮಂಗಳವಾರ ಕಾವೇರಿಯ ನಾಲ್ಕು ಜಲಾಶಯಗಳ ಸಂಗ್ರಹ 25 ಟಿಎಂಸಿ ಇದ್ದು, ಜಲಾಶಯಗಳ ಒಳ ಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಹಿಂಗಾರು ಮಳೆಯಾಗದಿದ್ದರೆ ಕುಡಿಯುವ ನೀರಿಗೆ ತತ್ವಾರವಾಗಲಿದ್ದು, ಮುಂದಿನ ಮೇ ವರೆಗೂ ನೀರು ಲಭ್ಯತೆಯೇ ಕಷ್ಟವಾಗಲಿದೆ.
ಅ.4ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಅ-.1ರಿಂದ 6ರವರೆಗೆ ತಮಿಳುನಾಡಿಗೆ 3.1 ಟಿಎಂಸಿ ನೀರು ಹರಿಸಲಾಗಿದ್ದು ಬಳಿಕ ಅ. 7ರಿಂದ ಪ್ರತಿದಿನವೂ 2 ಸಾವಿರ ಕ್ಯುಸೆಕ್ ಲೆಕ್ಕಾಚಾರದಂತೆ ನೀರು ಹರಿಸಲಾಗುತ್ತಿದೆ. ಅ.4ರ ವೇಳೆಗೆ ರಾಜ್ಯದ ಕಾವೇರಿ ಜಲಾಶಯಗಳಲ್ಲಿ 33.67 ಟಿಎಂಸಿ ನೀರಿನ ಸಂಗ್ರಹವಿದ್ದರೆ ಮಂಗಳವಾರ (ಅ.11) ಈ ಜಲಾಶಯಗಳಲ್ಲಿ ನೀರಿನ ಮಟ್ಟ25.09 ಟಿಎಂಸಿಗೆ ಕುಸಿದಿದೆ. ಒಟ್ಟು ಸುಮಾರು 8.58 ಟಿಎಂಸಿಗಳಷ್ಟುನೀರು ಕಳೆದ ಒಂದು ವಾರದ ಅವಧಿಯಲ್ಲಿ ಕಡಿಮೆಯಾಗಿದ್ದು ಬಹುಪಾಲು ತಮಿಳುನಾಡಿನ ಕಡೆಗೆ ಹರಿದಿದೆ.
ತಮಿಳುನಾಡಿಗೆ ಎಷ್ಟುನೀರು?:
ಸುಪ್ರೀಂ ಕೋರ್ಟ್ ಅ.4ರ ಆದೇಶದಂತೆ 1.10.2016ರಿಂದ 6.10.2016ರವರೆಗೆ ಪ್ರತಿದಿನ 6 ಸಾವಿರ ಕ್ಯುಸೆಕ್ನಂತೆ, 7.10.2016 ರಿಂದ 18.10.2016ರವರೆಗೆ 2 ಸಾವಿರ ಕ್ಯುಸೆಕ್ನಂತೆ ಒಟ್ಟು 24 ಸಾವಿರ ಕ್ಯುಸೆಕ್ ನೀರು ಹರಿಸಬೇಕಿದೆ. ಈ ದಿನಗಳಲ್ಲಿ ತಮಿಳುನಾಡಿನ ಬಿಳಿಗುಂಡ್ಲು ಅಣೆಕಟ್ಟು ಮಾಪಕದಲ್ಲಿ 5.28 ಟಿಎಂಸಿ ನೀರು ದಾಖಲಾಗಬೇಕಿದ್ದು ಕಾವೇರಿ ಜಲಾಶಯಗಳಿಂದ ಕನಿಷ್ಟವೆಂದರೂ 6.5ರಿಂದ 7 ಟಿಎಂಸಿಗಳಷ್ಟುಬಿಡುಗಡೆ ಮಾಡಬೇಕಿದೆ. ರಾಜ್ಯದ ಕಾ ವೇರಿ ಜಲಾನಯನದ ಭಾಗಗಳಿಗೂ ನೀರು ಹರಿಸಲಾ ಗುತ್ತಿದ್ದು, ಒಟ್ಟು ನೀರಿನ ಪ್ರಮಾಣ 8.5 ಟಿಎಂಸಿಗಳಷ್ಟುಕಡಿಮೆಯಾಗಿದೆ. ಒಳಹರಿವಿನ ಪ್ರಮಾಣವೂ ಕಡಿಮೆ ಯಾಗಿರುವುದು ಒಳಹರಿವು, ಹೊರಹರಿವಿನ ನಡುವೆ ಭಾರಿ ಅಂತರವಿರುವುದು ನೀರು ಇಷ್ಟುಪ್ರಮಾ ಣದಲ್ಲಿ ಕಡಿಮೆಯಾಗಲು ಕಾರಣವೆಂದು ತಜ್ಞರು ಹೇಳುತ್ತಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಇನ್ನೂ 7 ದಿನಗಳ ಕಾಲ ಪ್ರತಿದಿನ 2 ಸಾವಿರ ಕ್ಯುಸೆಕ್ನಂತೆ ಒಟ್ಟು 14 ಸಾವಿರ ಕ್ಯುಸೆಕ್ ನೀರು ತಮಿಳುನಾಡಿಗೆ ಹರಿಸಬೇಕಿದೆ. ಅಂದರೆ 1.27 ಟಿಎಂಸಿ ನೀರು ತಮಿಳುನಾಡಿಗೆ ನೀಡಬೇಕಿದ್ದು, ಇದೇ ಪ್ರಮಾಣದ ಒಳ ಹರಿವಿದ್ದರೆ ಕಾವೇರಿ ಜಲಾಶಯಗಳ ಸಂಗ್ರಹ ಇನ್ನಷ್ಟುಪ್ರಮಾಣದಲ್ಲಿ ಕುಸಿಯಲಿದೆ. ಕಳೆದ ಕೆಲ ದಿನಗಳಿಂದ ತೀವ್ರ ಒಣಹವೆ ಕಾವೇರಿ ಜಲಾನಯನ ಭಾಗದಲ್ಲಿರುವುದರಿಂದಲೂ ನೀರಿನ ಸಂಗ್ರಹದ ಮೇಲೂ ಪರಿಣಾಮ ಬೀರಲಿದೆ.
| ಜಲಾಶಯ | 4 ಅಕ್ಟೋಬರ್ | 11 ಅಕ್ಟೋಬರ್ |
|---|---|---|
| ಹಾರಂಗಿ | 6.67 | 4.14 |
| ಹೇಮಾವತಿ | 7.32 | 5.91 |
| ಕೆಆರ್'ಎಸ್ | 11.13 | 8.79 |
| ಕಬಿನಿ | 8.55 | 7.06 |
| ಒಟ್ಟು | 33.67 |
ಬೆಂಗಳೂರಿಗೇ 23 ಟಿಎಂಸಿ ನೀರು ಬೇಕು
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಜಲಾಶಯದ ಪ್ರದೇಶಗಳ ಜನರಿಗೆ ಕುಡಿಯುವ ನೀರೊದಗಿಸಲು ಒಟ್ಟು 23.05 ಟಿಎಂಸಿ ನೀರಿನ ಅಗತ್ಯತೆ ಇದೆಯೆಂದು ಸರ್ಕಾರವೇ ಸುಪ್ರಿಂಕೋರ್ಟ್ಗೆ ಮಾಹಿತಿ ನೀಡಿದೆ. ಈಗ ಇರುವ ನೀರಿನ ಸಂಗ್ರಹ 25 ಟಿಎಂಸಿಗಳಲ್ಲಿ ಇನ್ನೂ ಹರಿಸಬೇಕಾದ ನೀರಿನ ಸಂಗ್ರಹ ಅಂದಾಜಿಸಿದರೆ (1.27ಟಿಎಂಸಿ) ರಾಜ್ಯದ ಪಾಲಿಗೆ ಉಳಿಕೆಯಾಗುವುದು ಕುಡಿಯುವ ನೀರಿಗೆ ಸರಿ ಹೋಗುತ್ತದೆ. ಆದರೆ ಈ ನೀರಿನ ಮಟ್ಟಜಲಾಶಯಗಳ ಡೆಡ್ ಸ್ಟೋರೇಜ್ಅನ್ನೂ ಒಳಗೊಂಡಿದ್ದು, ಕುಡಿಯುವ ನೀರಿಗೂ ಈಗ ಇರುವ ಸಂಗ್ರಹ ಸಾಲದೇನೋ ಎನ್ನುವಂತಿದೆ. ಹಿಂಗಾರು ಮಳೆಯೊಂದೇ ರಾಜ್ಯಕ್ಕೆ ಆಸರೆಯಾಗಿದೆ. ಮುಂದಿನ ದಿನಗಳಲ್ಲಿ 15 ಟಿಎಂಸಿ ನೀರು ಸಂಗ್ರಹÜವಾಬಗಬಹುದೆಂಬ ನಿರೀಕ್ಷೆಯಿದೆ. ಒಂದೊಮ್ಮೆ ಮಳೆಯಾಗದೇ ಹೋದರೆ ರಾಜ್ಯದ ಕುಡಿಯುವ ನೀರಿಗೂ ಸಂಕಷ್ಟಸ್ಥಿತಿ ತಲೆದೋರಲಿದೆ. ಮಂಗಳವಾರ ದಿಂದ ಮಳೆಯಾಗುವ ಲಕ್ಷಣಗಳು ಗೋಚರಿಸಿದ್ದು, ಸ್ವಲ್ಪ ನೆಮ್ಮದಿ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.