
ಬೆಂಗಳೂರು(ಫೆ.07): ಜಯಲಲಿತಾ ನಿಧನದ ಬಳಿಕ ಐಎಐಡಿಎಂಕೆ ಮೇಲೆ ಹಿಡಿತ ಸಾಧಿಸಿ, ಮುಖ್ಯಮಂತ್ರಿ ಗಾದಿಯೇರಲು ಸಜ್ಜಾಗಿರುವ ಶಶಿಕಲಾಗೆ ಈಗ ಕಾನೂನು ಸಂಕಷ್ಟದ ಭೀತಿ ಎದುರಿಸುತ್ತಿದ್ದಾರೆ. ಶಶಿಕಲಾ ಪ್ರಮಾಣಕ್ಕೂ ಮುನ್ನ ಅವರ ವಿರುದ್ಧದ ಆರೋಪ ಹಾಗೂ ಭ್ರಷ್ಟಾಚಾರ ಪ್ರಕರಣದ ತೀರ್ಪಿನ ಪರಿಣಾಮ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ದೆಹಲಿಗೆ ತೆರಳಿದ್ದ ತಮಿಳುನಾಡು ರಾಜ್ಯಪಾಲ ವಿದ್ಯಾ ಸಾಗರ ರಾವ್, ಚೆನ್ನೈಗೆ ಹಿಂದಿರುಗದೇ ತಡರಾತ್ರಿ ಮುಂಬೈಗೆ ತೆರಳಿರುವುದು ಅಚ್ಚರಿ ಮೂಡಿಸಿದೆ. ರಾಜ್ಯಪಾಲರ ಈ ನಡೆಯಿಂದಾಗಿ ಮಂಗಳವಾರ ಶಶಿಕಲಾ ಪ್ರಮಾಣವಚನ ನಡೆಯುವುದೇ ಅನುಮಾನವಾಗಿದೆ.
ಒಂದೆಡೆ ಶಶಿಕಲಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸುಪ್ರೀಂಕೋರ್ಟ್ನಲ್ಲಿ ಶಶಿಕಲಾ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಅಕ್ರಮ ಆಸ್ತಿ ಪ್ರಕರಣದ ಅಂತಿಮ ತೀರ್ಪು ಹೊರಬರುವ ವರೆಗೂ ಶಶಿಕಲಾ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಬಾರದು ಎಂದು ತಮಿಳುನಾಡಿನ ಸಂಘಟನೆಯೊಂದು ಸುಪ್ರೀಂಗೆ ಮನವಿ ಮಾಡಿದೆ. ಆ ಪಿಐಎಲ್ ವಿಚಾರಣೆ ಇಂದು ನಡೆಯುವ ಸಾಧ್ಯತೆ ಇದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕುರಿತು ಇದೇ ವಾರ ಸುಪ್ರೀಂಕೋರ್ಟ್ ತೀರ್ಪು ನೀಡುವುದಾಗಿ ಹೇಳಿದೆ. ಇದು ಶಶಿಕಲಾರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಜಯಲಲಿತಾ ಪ್ರಮುಖ ಆರೋಪಿಯಾಗಿದ್ದರು. ಅವರ ಆಪ್ತೆ ಶಶಿಕಲಾ ವಿರುದ್ಧ ಭ್ರಷ್ಟಾಚಾರಕ್ಕೆ ನೆರವು ನೀಡಿದ ಆರೋಪ ಹೊರಿಸಲಾಗಿತ್ತು. ಪ್ರಮುಖ ಆರೋಪಿ ಜಯಲಿಲತಾ ಈಗಾಗಲೇ ಮೃತಪಟ್ಟಿದ್ದಾರೆ. ಆದರೆ ಇತರ ಆರೋಪಿಗಳ ವಿರುದ್ಧ ಪ್ರಕರಣ ಮುಂದುವರಿಯಲಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಯ ವಿಚಾರಣೆ ಪೂರ್ಣ ಗೊಳಿಸಿರುವ ಸುಪ್ರೀಂಕೋರ್ಟ್, ಒಂದು ವಾರದಲ್ಲಿ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.