
ದುಬೈ (ಜೂ.20) : ಕರ್ನಾಟಕದ 40 ಸಾವಿರಕ್ಕೂ ಅಧಿಕ ಮಂದಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಜ್ಯುವೆಲ್ಸ್ ಕಂಪನಿ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್, ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದಲ್ಲಿರುವ ಭಾರತೀಯ ಮೂಲದ ಉದ್ಯೋಗಿಗಳಿಗೂ ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಬಂಧುಗಳಿಂದ ಐಎಂಎ ಕಂಪನಿ, ಅದರಲ್ಲೂ ವಿಶೇಷವಾಗಿ ‘ಹಲಾಲ್’ ಹೂಡಿಕೆ ಬಗ್ಗೆ ಮಾಹಿತಿ ಪಡೆದ ಅನಿವಾಸಿ ಭಾರತೀಯರು ಕೋಟ್ಯಂತರ ರು.ಗಳನ್ನು ತೊಡಗಿಸಿದ್ದಾರೆ. ಮನ್ಸೂರ್ ಖಾನ್ ಪರಾರಿಯಾದ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ವಾರ್ಷಿಕ ಶೇ. 36 ರಷ್ಟು ಪ್ರತಿಫಲ ನೀಡುವ ಭರವಸೆ ನೀಡಿ, ಆರಂಭಿಕವಾಗಿ ಹೂಡಿಕೆ ದಾರರಿಗೆ ಅಷ್ಟೂ ಬಡ್ಡಿಯನ್ನು ಮನ್ಸೂರ್ ನೀಡಿದ್ದ.
ಹೀಗಾಗಿ ಮನ್ಸೂರ್ ಐಎಂಎ ಕಂಪನಿಯನ್ನು ಅತಿಯಾಗಿ ನಂಬಿದ ಯುಎಇಯಲ್ಲಿ ನೆಲೆಸಿರುವ ಭಾರತೀಯರು ಕಷ್ಟಪಟ್ಟು ದುಡಿದ ಹಣವನ್ನು ಆ ಕಂಪನಿಯಲ್ಲಿ ತೊಡಗಿಸಿ ಮೋಸ ಹೋಗಿದ್ದಾರೆ. ‘ಐಎಂಎ ಕಂಪನಿ ಮುಳುಗಿರುವುದನ್ನು ಕೇಳಿ ಆಘಾತಕ್ಕೆ ಒಳಗಾಗಿದ್ದೇನೆ’ ಎಂದು 2016 ರಲ್ಲಿ ಐಎಂಎ ಕಂಪನಿಯಲ್ಲಿ 75 ಲಕ್ಷ ರು. ಹೂಡಿಕೆ ಮಾಡಿದ್ದ ದುಬೈ ನಿವಾಸಿ, ಸ್ವೀಡನ್ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿರುವ 58 ವರ್ಷದ ಫೈಯಾಜ್ ಘನಿ ಅಳಲು ತೋಡಿಕೊಳ್ಳು ತ್ತಾರೆ.
14 ವರ್ಷಗಳ ಕಾಲ ಕುಟುಂಬದಿಂದ ದೂರವಿದ್ದು ದುಡಿದು, ಹಣ ಉಳಿತಾಯ ಮಾಡಿದ್ದೆ. ಈಗ ಹಣ ಕಳೆದುಕೊಂಡಿದ್ದೇನೆ. ತವರಿನಲ್ಲಿ ಮನೆ ನಿರ್ಮಾಣ ವನ್ನು ಈಗಷ್ಟೇ ಆರಂಭಿಸಿದ್ದೆ. ಬೆಂಗಳೂರಿನಲ್ಲಿ ಸ್ವಂತದ್ದೊಂದು ಐಟಿ ಕಂಪನಿ ತೆರೆಯುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಈಗ ಎಲ್ಲವೂ ಮುಗಿಯಿತು ಎಂದು 2015 ರಿಂದ ಈವರೆಗೆ 77 ಲಕ್ಷ ರು. ತೊಡಗಿಸಿರುವ ಅಬುಧಾಬಿ ನಿವಾಸಿ, ಮೈಸೂರಿನ ಮೊಹಮ್ಮದ್ ಅಮೀರ್ (ಹೆಸರು ಬದಲಿಸಲಾ ಗಿದೆ) ದುಃಖ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.