ಮಲ್ಲಿಕಾರ್ಜುನ್ ಖರ್ಗೆಗೆ ಸಿಗುತ್ತಾ ಮುಖ್ಯಮಂತ್ರಿ ಸ್ಥಾನ..?

First Published Jun 9, 2018, 10:50 AM IST
Highlights

‘ನೀವೆಲ್ಲರು (ಪತ್ರಿಕೆಯವರು) ನನ್ನನ್ನು ‘ಪೇಪರ್‌ ಮುಖ್ಯಮಂತ್ರಿ’ ಮಾಡಿದ್ದೀರಿ ಅಷ್ಟೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ.’ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. 
 

ಕಲಬುರಗಿ :  ‘ನೀವೆಲ್ಲರು (ಪತ್ರಿಕೆಯವರು) ನನ್ನನ್ನು ‘ಪೇಪರ್‌ ಮುಖ್ಯಮಂತ್ರಿ’ ಮಾಡಿದ್ದೀರಿ ಅಷ್ಟೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ.’

‘ಸಮ್ಮಿಶ್ರ ಸರ್ಕಾರ ರಚನೆ ವೇಳೆ ಮುಖ್ಯಮಂತ್ರಿ ಹುದ್ದೆಗೆ ನಿಮ್ಮ ಹೆಸರು ಕೇಳಿಬಂದಿತ್ತಂತೆ ಹೌದಾ?’ ಎನ್ನುವ ಪ್ರಶ್ನೆಗೆ ಕಾಂಗ್ರೆಸ್‌ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ನೀಡಿದ ಉತ್ತರ ಇದು. ಇಲ್ಲಿನ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್‌ ಫಾತೀಮಾ ಬೇಗಂ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ ಖರ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹುದ್ದೆಗೆ ಅವರ ಹೆಸರು ಹೇಗೆ ಬಂತು, ಇವರ ಹೆಸರು ಹೇಗೆ ಬಂತು ಅನ್ನೋ ಚರ್ಚೆಯನ್ನು ಈಗ ಮಾಡಲು ಹೋಗುವುದಿಲ್ಲ. ಹೈಕಮಾಂಡ್‌ ರಚಿಸಿರುವ ಸೂತ್ರದಡಿ ದೋಸ್ತಿ ಸರ್ಕಾರ ನಡೆಯುತ್ತದೆ. ಜನರ ಆಶೋತ್ತರಗಳನ್ನು ಈ ಸರ್ಕಾರ ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಿನ್ನಮತಕ್ಕೆ ಪರಿಹಾರ: ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬುದು ಕೇವಲ ಉಹಾಪೋಹ. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಹುಟ್ಟಿಕೊಂಡಿರುವ ಭಿನ್ನಮತ ಶೀಘ್ರದಲ್ಲಿ ಬಗೆಹರಿಯಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕರಾರ‍ಯರೂ ಗುಂಪುಗಾರಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಎಲ್ಲರೂ ಒಂದಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಯಾಕೆ ರಚನೆಯಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಜಾತ್ಯತೀತ ನಿಲುವನ್ನು ಕಾಪಾಡಿಕೊಂಡು ಹೋಗಲು ಹಾಗೂ ಸಂವಿಧಾನ ಉಳಿಸಲು ನಾವು ಮೈತ್ರಿಗೆ ಮುಂದಾಗಿದ್ದೇವೆ. ಹೀಗಾಗಿ ಗುಂಪುಗಾರಿಕೆ ಮಾಡಿಕೊಂಡು ಪಕ್ಷದ ಸಂಘಟನೆ ಹಾಳು ಮಾಡುವ ಜಾಯಮಾನ ಯಾರಲ್ಲೂ ಇಲ್ಲ ಎಂದರು.

ಸಮ್ಮಿಶ್ರ ಸರ್ಕಾರ ಎಂದಾಗ ಸಹಜವಾಗಿಯೇ ಸಂಪುಟ ರಚನೆ ಸಂದರ್ಭದಲ್ಲಿ ಸಣ್ಣಪುಟ್ಟಅಸಮಾಧಾನ ಇರುತ್ತವೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಇದನ್ನೆಲ್ಲ ಗಮನಿಸುತ್ತಿದ್ದಾರೆ. ಅರ್ಹರಾದ ಹಲವರಿಗೆ ಮಂತ್ರಿಗಿರಿ ದೊರಕಿಲ್ಲ ಎಂಬ ಕೂಗಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್‌ ಇದನ್ನೆಲ್ಲ ಬಗೆಹರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾವೇನಾದರೂ ಅತೃಪ್ತಿ ಶಮನದ ಸಂಧಾನಕ್ಕೆ ಮುಂದಾಗುವಿರಾ ಎಂಬ ಪ್ರಶ್ನೆಗೆ, ಈಗಾಗಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಈ ಕೆಲಸ ಶುರು ಮಾಡಿದ್ದಾರೆ. ಹೈಕಮಾಂಡ್‌ ಸಹ ಈ ಬಗ್ಗೆ ಗಮನಿಸುತ್ತಿದೆ ಎಂದಷ್ಟೇ ಉತ್ತರಿಸಿದರು.

click me!