
ಬೆಂಗಳೂರು (ಜೂ. 26): ದೇವರ ಅನುಗ್ರಹದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ. ಹೀಗಾಗಿ ನನ್ನನ್ನು ಈ ಸ್ಥಾನದಿಂದ ಕೆಳಗಿಳಿಸುವುದು ಸುಲಭದ ಮಾತಲ್ಲ.
ನಾನು ಅದೃಷ್ಟವಂತ ರಾಜಕಾರಣಿ. ಒಳ್ಳೆ ಕೆಲಸ ಮಾಡಲಿ ಎಂದು ದೇವರು ಮುಖ್ಯಮಂತ್ರಿ ಮಾಡಿದ್ದಾನೆ. ಆದರೆ, ಕೆಲವರು ಕುಮಾರಸ್ವಾಮಿ ಎಷ್ಟುದಿನ ಮುಖ್ಯಮಂತ್ರಿಯಾಗಿರುತ್ತಾರೋ ಏನೋ, ಬೇಗ ಬೇಗ ಕೆಲಸ ಮಾಡಿಕೊಳ್ಳಬೇಕು ಎಂಬ ಆತುರದಲ್ಲಿದ್ದಾರೆ. ನೀವು ತಿಳಿದಂತೆ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಅಷ್ಟುಸುಲಭವಲ್ಲ. ಸಾಧ್ಯವೂ ಇಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ಸಾಲ ಮನ್ನಾ ನನ್ನ ಬದ್ಧತೆ. ನಾನು ಪಲಾಯನವಾದಿಯಾಗುವುದಿಲ್ಲ. ಕೊಟ್ಟಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಜನರು ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಆದರೆ, ಮತ ಹಾಕಿರಲಿಲ್ಲ. ಅವರ ಭಾವನೆಯಂತೆ ದೇವರ ಅನುಗ್ರಹದಿಂದ ಮುಖ್ಯಮಂತ್ರಿಯಾಗಿದ್ದೇನೆ. ನಾನೊಬ್ಬ ಅದೃಷ್ಟವಂತ ರಾಜಕಾರಣಿ. ಒಳ್ಳೆಯ ಕೆಲಸ ಮಾಡಲಿ ಎಂದು ದೇವರು ಮುಖ್ಯಮಂತ್ರಿಯಾಗಿ ಮಾಡಿದ್ದಾನೆ. ಹೀಗಾಗಿ, ಜನರ ಕಷ್ಟಗಳನ್ನು ಪರಿಹರಿಸಿ ಜನಸಾಮಾನ್ಯರ ಮುಖ್ಯಮಂತ್ರಿಯಾಗಬೇಕು, ಜನಸ್ನೇಹಿ ಸರ್ಕಾರ ನೀಡಬೇಕು ಎಂಬ ಚಿಂತನೆ ಹೊಂದಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಸಣ್ಣ ರೈತರು ಮತ್ತು ಸಣ್ಣ ಕೈಗಾರಿಕೋದ್ಯಮಿಗಳ ಕಷ್ಟಒಂದೇ ಆಗಿದೆ. ರಾಜ್ಯದ ಜನರು ಸ್ವಲ್ಪ ಸಮಯ ಮಾಡಿಕೊಟ್ಟರೆ, ಎಲ್ಲ ವರ್ಗದ ಸಮಸ್ಯೆಗಳನ್ನು ಈಡೇರಿಸಿ ಜನಪರ ಸರ್ಕಾರ ನೀಡುವ ಇಚ್ಛೆ ಹೊಂದಿದ್ದೇನೆ. ಎರಡು ಬಾರಿ ದೇವರು ನನಗೆ ಸಮ್ಮಿಶ್ರ ಸರ್ಕಾರ ನಿಭಾಯಿಸುವ ಹೊಣೆಗಾರಿಕೆ ವಹಿಸಿದ್ದಾನೆ. ಆದರೆ, 12 ವರ್ಷದ ಹಿಂದಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಆಗಿದೆ ಎಂದರು.
ಜೂ.5ರ ವರೆಗೆ ಕಾಯಿರಿ:
ನನ್ನದೇ ಕಲ್ಪನೆಗಳನ್ನಿಟ್ಟುಕೊಂಡು ನಾನು ಯೋಜನೆಗಳನ್ನು ರೂಪಿಸುತ್ತಿದ್ದೇನೆ. ರೈತರ ಸಾಲ ಮನ್ನಾ ಮಾಡುವುದರಿಂದ ರೈತಾಪಿ ವರ್ಗ ಸುಖವಾಗಿ ಜೀವನ ಮಾಡುತ್ತದೆ ಎಂಬ ಆಶಾಭಾವನೆ ನನ್ನಲ್ಲಿ ಇಲ್ಲ. ರೈತರ ಆತ್ಮಹತ್ಯೆಗೆ ಈವರೆಗೆ ನಿಖರ ಕಾರಣ ಪತ್ತೆ ಹಚ್ಚಲು ಕೂಡ ಸಾಧ್ಯವಾಗಿಲ್ಲ. ಈ ಬಗ್ಗೆಯೂ ಅಧ್ಯಯನ ಮಾಡಬೇಕಿದೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಹೊಸ ಸಾಲ ಪಡೆಯುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ, ಬೇರೆ ಯೋಜನೆಗಳಲ್ಲಿ ಕಮೀಷನ್ ಸಿಗುತ್ತೆ. ರೈತರ ಸಾಲ ಮನ್ನಾ ಮಾಡಿದ್ರೆ ಕಮೀಷನ್ ಸಿಗಲ್ಲ ಎಂಬ ಕಾರಣಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿವೆ. ನನ್ನ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ಯಾವುದಕ್ಕೂ ಜೂ.5ರ ವರೆಗೆ ಕಾಯಿರಿ ಎಂದು ತಿಳಿಸಿದರು.
ಆಂಧ್ರ ಪ್ರದೇಶದಲ್ಲಿ ‘0’ ಬಜೆಟ್ ನ್ಯಾಚುರಲ್ ಫಾರ್ಮಿಂಗ್ ಅನುಷ್ಠಾನವಾಗಿದೆ. ಈ ಬಗ್ಗೆ ಆಂಧ್ರ ಪ್ರದೇಶದಿಂದ ಅಧಿಕಾರಿಗಳನ್ನು ಕರೆಸಿಕೊಂಡು ಚರ್ಚಿಸಿದ್ದೇನೆ. ಈ ಪದ್ಧತಿ ಅನುಷ್ಠಾನ ಕಷ್ಟಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರು. ಬದ್ಧತೆ ಇದ್ದಲ್ಲಿ ಏಕೆ ಸಾಧ್ಯವಿಲ್ಲ ಎನ್ನುವುದು ನನ್ನ ವಾದ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.