ಎಸ್.ಆರ್ ಪಾಟೀಲ್‌ಗೆ ಯಾವ ಸ್ಥಾನವೂ ಇಲ್ಲ?

First Published Jun 5, 2018, 7:47 AM IST
Highlights

ಒಂದು ಹಂತದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಹುರಿಯಾಳಾಗಿ ಬಿಂಬಿತರಾಗಿದ್ದ ಎಸ್‌.ಆರ್‌. ಪಾಟೀಲ್‌ ಅವರಿಗೆ ಇದೀಗ ಸಚಿವ ಸ್ಥಾನದಿಂದಲೂ ಕೊಕ್‌ ಸಿಗುವ ಸಂಭವವಿದೆ.

ಬೆಂಗಳೂರು :  ಒಂದು ಹಂತದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಹುರಿಯಾಳಾಗಿ ಬಿಂಬಿತರಾಗಿದ್ದ ಎಸ್‌.ಆರ್‌. ಪಾಟೀಲ್‌ ಅವರಿಗೆ ಇದೀಗ ಸಚಿವ ಸ್ಥಾನದಿಂದಲೂ ಕೊಕ್‌ ಸಿಗುವ ಸಂಭವವಿದೆ. 

ಇದಕ್ಕೆ ಮುಖ್ಯ ಕಾರಣ ಎಸ್‌.ಆರ್‌. ಪಾಟೀಲ್‌ ಪರ ಹೈಕಮಾಂಡ್‌ನಲ್ಲಿ ಲಾಬಿ ನಡೆಸುವ ಉದ್ದೇಶ ಹೊಂದಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಮನಸ್ಸು ಬದಲಾಯಿಸಿರುವುದು ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರು ಎರಡನೇ ಕ್ಷೇತ್ರವಾಗಿ ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದವರು ಎಸ್‌.ಆರ್‌.ಪಾಟೀಲ್‌. ಆದರೆ, ಬಾದಾಮಿಯಲ್ಲಿ ನಿರೀಕ್ಷಿತ ಮಟ್ಟದ ಅಂತರದ ಗೆಲುವು ಸಿದ್ದರಾಮಯ್ಯ ಅವರಿಗೆ ದೊರಕಿಲ್ಲ. ಎಸ್‌.ಆರ್‌.ಪಾಟೀಲ್‌ ಮೇಲೆ ಈ ಬೇಸರ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ. ಹೀಗಾಗಿ ಇದುವರೆಗೂ ಎಸ್‌.ಆರ್‌.ಪಾಟೀಲ್‌ ಅವರನ್ನು ಸಚಿವ ಸ್ಥಾನಕ್ಕೆ ಬಿಂಬಿಸುವ ಉದ್ದೇಶ ಹೊಂದಿದ್ದ ಸಿದ್ದರಾಮಯ್ಯ ನಿಲುವು ಬದಲಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಎಸ್‌.ಆರ್‌. ಪಾಟೀಲ್‌ ಬದಲಾಗಿ ಎಚ್‌.ಎಂ.ರೇವಣ್ಣ ಪರವಾಗಿ ಅವರು ಲಾಬಿ ನಡೆಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಸಹ ಎಸ್‌.ಆರ್‌.ಪಾಟೀಲ್‌ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಒಂದು ಕಾಲದಲ್ಲಿ ಪರಮೇಶ್ವರ್‌ ಬಣದಲ್ಲಿ ಇದ್ದ ಎಸ್‌.ಆರ್‌. ಪಾಟೀಲ್‌ ಅವರು ಅನಂತರ ಸಿದ್ದರಾಮಯ್ಯ ಅವರ ಪರ ನಿಂತರು. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರು ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆಲ್ಲುವಂತೆ ಮಾಡುವಲ್ಲಿಯೂ ಎಸ್‌.ಆರ್‌.ಪಾಟೀಲ್‌ ಪಾತ್ರ ನಿರ್ವಹಿ ಸಿದ್ದರು. ಹೀಗಾಗಿ ಪರಮೇಶ್ವರ್‌ ಕೂಡ ಎಸ್‌.ಆರ್‌ ಪಾಟೀಲ್‌ ಪರ ನಿಲ್ಲುತ್ತಿಲ್ಲ ಎಂದು ಮೂಲಗಳು ಹೇಳುತ್ತವೆ.

click me!