ಸರ್ಕಾರಿ ನೌಕರರು ತಡವಾಗಿ ಬಂದ್ರೆ ರಜೆ ಕಟ್‌

By Web DeskFirst Published Aug 30, 2019, 7:15 AM IST
Highlights

ಸರ್ಕಾರಿ ನೌಕರರು ತಡವಾಗಿ ಕಚೇರಿಗೆ ಬಂದರೆ ಅವರ ರಜೆ ಕಡಿತವಾಗಲಿದೆ. ಸರಿಯಾದ ಸಮಯಕ್ಕೆ ಆಗಮಿಸುವುದನ್ನು ಕಡ್ಡಾಯ ಮಾಡಲಾಗಿದೆ. 

ಬೆಂಗಳೂರು [ಆ.30]: ಬೆಳಗ್ಗೆ ತಡವಾಗಿ ಕಚೇರಿಗೆ ಬರುವ ಹಾಗೂ ಸಂಜೆ ಅವಧಿಗೂ ಮೊದಲೇ ಕಚೇರಿಯಿಂದ ಹೊರಡುವ ರಾಜ್ಯ ಸರ್ಕಾರದ ಸಚಿವಾಲಯದ ನೌಕರರ ಮೇಲೆ ನಿಗಾ ವಹಿಸಿ ಅವರ ಪಾಲಿನ ರಜೆಗಳನ್ನು ದಿನಗಳ ಆಧಾರದಲ್ಲಿ ಕಡಿತಗೊಳಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ನೌಕರರು ಸಮಯ ಪ್ರಜ್ಞೆ, ಕಾರ್ಯನಿಷ್ಠೆಗೆ ಬದ್ಧವಾಗಿರುವಂತೆ ಹಲವು ಬಾರಿ ಸುತ್ತೋಲೆ ಹೊರಡಿಸಿ ಎಚ್ಚರಿಕೆ ನೀಡಿದ್ದರೂ ಆಗಸ್ಟ್‌ 1ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಳಿತ ಮತ್ತು ಸುಧಾರಣಾ ಇಲಾಖೆಗೆ ಕಚೇರಿ ಅವಧಿಯಲ್ಲಿ ಭೇಟಿ ನೀಡಿದಾಗ ಹಲವು ಸಿಬ್ಬಂದಿ ಹಾಜರಿಲ್ಲದಿದ್ದರಿಂದ ಮುಂದೆ ಇಂತಹ ತಪ್ಪುಗಳಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾಗಾಗಿ, ಆಡಳಿತ ಮತ್ತು ಸುಧಾರಣಾ ಇಲಾಖೆಯು ಇತ್ತೀಚೆಗೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಸಚಿವಾಲಯದ ಎಲ್ಲಾ ಇಲಾಖಾ ಅಧಿಕಾರಿಗಳು, ಶಾಖಾಧಿಕಾರಿಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಸಚಿವಾಲಯದ ನೌಕರರು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು ಮತ್ತು ಸಂಜೆ 5.30ರ ನಂತರ ಕಚೇರಿಯಿಂದ ಹೊರಡಬೇಕು ಹಾಗೂ ಕಚೇರಿ ವೇಳೆಯಲ್ಲಿ ಅವರವರ ಸ್ಥಾನದಲ್ಲಿ ತಪ್ಪದೇ ಇರಬೇಕೆಂದು ಸೂಚಿಸಲಾಗಿದೆ. ಕಚೇರಿಯ ನಿಗದಿತ ಸಮಯವನ್ನು ಪಾಲಿಸದ ನೌಕರರ ವಿರುದ್ಧ ದಿನಗಳ ಆಧಾರದ ಮೇಲೆ ಅವರ ಲೆಕ್ಕದಲ್ಲಿರುವ ರಜೆಗಳನ್ನು ಕಡಿತಗೊಳಿಸಲು ಎ.ಎಂ.ಎಸ್‌. ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

click me!