ಕಾಂಗ್ರೆಸ್ - ಜೆಡಿಎಸ್ ನಾಯಕರಿಗೆ ಪರಮೇಶ್ವರ್ ಖಡಕ್ ತಾಕೀತು

First Published Jun 18, 2018, 11:04 AM IST
Highlights

ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿ ಬಗ್ಗೆ ಇನ್ನುಮುಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಾವು ಇಲ್ಲವೇ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮಾತ್ರ ಮಾತನಾಡುವಂತಾಗಬೇಕು. ನಮ್ಮನ್ನು ಬಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬೇರಾವುದೇ ಮುಖಂಡರು ಈ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಬೆಂಗಳೂರು :  ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿ ಬಗ್ಗೆ ಇನ್ನುಮುಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಾವು ಇಲ್ಲವೇ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮಾತ್ರ ಮಾತನಾಡುವಂತಾಗಬೇಕು. ನಮ್ಮನ್ನು ಬಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬೇರಾವುದೇ ಮುಖಂಡರು ಈ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.

 ಸದಾಶಿವನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ  ಮೊಯ್ಲಿ ನೀಡಿರುವ ಹೇಳಿಕೆ ಮತ್ತು ಕಾಂಗ್ರೆಸ್ ದಿನಕ್ಕೊಂದು ಷರತ್ತು ವಿಧಿಸುತ್ತಿದ್ದು ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಾರದು ಎಂದು ವಿಧಾನ ಪರಿಷತ್‌ನ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ನೀಡಿರುವ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. 

ಸರ್ಕಾರದ ಭವಿಷ್ಯದ ಬಗ್ಗೆ ದಿನಕ್ಕೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಒಬ್ಬರು ಆರು ತಿಂಗಳು, ಒಂದು ವರ್ಷಕ್ಕೆ ಸರ್ಕಾರದ ಮೈತ್ರಿ ಮುರಿದು ಬೀಳಲಿದೆ ಎಂದೆಲ್ಲ ಹೇಳಿಕೆ ನೀಡಿ ತೀವ್ರ ಗೊಂದಲ, ಮುಜುಗರ ಉಂಟು ಮಾಡುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಸರ್ಕಾರದ ಬಗ್ಗೆ ಬೇರೆ ಎಲ್ಲರೂ ಮಾತನಾಡುವುದು ನಿಲ್ಲಿಸಬೇಕು ಎಂದರು.

ಸಚಿವ ಡಿಕೆಶಿ ಸಲಹೆ: ಸಮ್ಮಿಶ್ರ ಸರ್ಕಾರದಲ್ಲಿನ ಗೊಂದಲ, ಸಮಸ್ಯೆಗಳನ್ನು ಎರಡೂ ಪಕ್ಷಗಳ ನಾಯಕರೂ ಪಕ್ಷದ ಆಂತರಿಕ ಚೌಕಟ್ಟಿನಲ್ಲಿ ಪರಿಹರಿಸಿಕೊಳ್ಳಬೇಕಾಗಿದೆ.ಬಹಿರಂಗ ಹೇಳಿಕೆ ನೀಡಬೇಡಿ ಎಂದು ವೈದ್ಯಕೀಯ  ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಕೂಡ ಸಲಹೆ ನೀಡಿದ್ದಾರೆ. ಬಜೆಟ್ ಸಿದ್ಧತೆ  ವಿಚಾರವಾಗಿ ಇನ್ನೆರಡು ದಿನಗಳಲ್ಲಿ ಉಭಯ ಪಕ್ಷಗಳ ಸದಸ್ಯರ ನೇತೃತ್ವದಲ್ಲಿ ನಡೆಯಲಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕಾರ್ಯಸೂಚಿ ಸಮಿತಿ ಸಭೆ ನಡೆಯುವ ಹಿನ್ನೆಲೆಯಲ್ಲಿ ಭಾನುವಾರ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಅವರು ಚರ್ಚೆ ನಡೆಸಿದರು. 

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವುದು ಒಂದು ಪಕ್ಷದ ಸರ್ಕಾರವಲ್ಲ, ಸಮ್ಮಿಶ್ರ ಸರ್ಕಾರ. ಉಭಯ  ಪಕ್ಷಗಳ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಬೇಡಿ. ಯಾವುದೇ ಸಮಸ್ಯೆಗಳಿದ್ದರೂ ಪಕ್ಷದ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಿ. ತಮ್ಮ ಬಳಿಯೂ ಬಂದು ಸಮಸ್ಯೆ ಬಗ್ಗೆ ಮಾತನಾಡಲು ಅಭ್ಯಂತರವಿಲ್ಲ ಎಂದು ಮನವಿ ಮಾಡಿದರು.

click me!