ರೈಲ್ವೆ ಪ್ರಯಾಣಿಕರಿಗೆ ಇದೀಗ ಐಆರ್ ಸಿಟಿಸಿ ಶಾಕಿಂಗ್ ಸುದ್ದಿಯೊಂದನ್ನು ನೀಡುತ್ತಿದೆ. ಪ್ರಯಾಣಿಕರಿಗೆ ನೀಡುತ್ತಿದ್ದ ಉಚಿಯ ವಿಮಾ ಸೌಲಭ್ಯವನ್ನು ರದ್ದು ಮಾಡಲು ನಿರ್ಧರಿಸಿದೆ.
ನವದೆಹಲಿ: ರೈಲು ಪ್ರಯಾಣದ ವೇಳೆಯ ಉಚಿತ ವಿಮಾ ಸೌಲಭ್ಯವನ್ನು ತೆಗೆದು ಹಾಕಲು ಭಾರತೀಯ ರೈಲ್ವೆಯ ಅಂಗ ಸಂಸ್ಥೆಯಾದ ಐಆರ್ಸಿಟಿಸಿ ನಿರ್ಧರಿಸಿದೆ. ಸೆಪ್ಟೆಂಬರ್ 1ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಈವರೆಗೆ ಟಿಕೆಟ್ ಬುಕ್ ಮಾಡಿದಾಗ ತನ್ನಿಂತಾನೇ ವಿಮಾ ಸೌಲಭ್ಯವೂ ಪ್ರಯಾಣಿಕರಿಗೆ ದೊರಕುತ್ತಿತ್ತು. ಆದರೆ ಇನ್ನು ಟಿಕೆಟ್ ಕಾಯ್ದಿರಿಸುವ ವೇಳೆ ವಿಮೆ ಬೇಕೇ? ಬೇಡವೇ ಎಂಬ ಆಯ್ಕೆಯನ್ನು ಪ್ರಯಾಣಿಕರಿಗೆ ಐಆರ್ಸಿಟಿಸಿ ಬುಕ್ಕಿಂಗ್ ವೆಬ್ಸೈಟ್ ನೀಡುತ್ತದೆ. ಆಗ ವಿಮೆ ಬೇಕು ಎಂದವರು ‘ಆಪ್ಟ್-ಇನ್’ ಎಂದೂ, ಬೇಡ ಎನ್ನುವವರು ‘ಆಪ್ಟ್-ಔಟ್’ ಎಂದೂ ಆಯ್ಕೆ ಮಾಡಿಕೊಳ್ಳಬೇಕು. ಆದರೆ ವಿಮೆ ಬೇಕು ಎನ್ನುವವರು ಎಷ್ಟುಹಣ ಕಟ್ಟಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಈಗ ರೈಲ್ವೆ ಅಪಘಾತದ ಸಂದರ್ಭದಲ್ಲಿ ಮಡಿದರೆ 10 ಲಕ್ಷ ರು., ಅಂಗವಿಕಲನಾದರೆ 7.5 ಲಕ್ಷ ರು., ಗಾಯಗೊಂಡರೆ 2 ಲಕ್ಷ ರು., ಹಾಗೂ ಶವ ಸಾಗಿಸಲು 10 ಸಾವಿರ ರು. ವಿಮಾ ಹಣ ಲಭಿಸುತ್ತದೆ.